ಅಹಮದಾಬಾದ್: ಗುಜರಾತಿನ ಬಾರಾಮತಿಯ ಮುಧಾಳೆ ಗ್ರಾಮದಲ್ಲಿ ಇನ್ನೇನು ಅಂತ್ಯಕ್ರಿಯೆ ನಡೆಯಬೇಕೆನ್ನುವಷ್ಟರಲ್ಲಿ 76 ವರ್ಷದ ಹಿರಿಯ ಮಹಿಳೆಯೊಬ್ಬಳು ಎದ್ದುಕುಳಿತು ಎಲ್ಲರನ್ನೂ ಅಚ್ಚರಿಗೆ ದೂಡಿದ ಘಟನೆ ಶನಿವಾರ ನಡೆದಿದೆ.
ಮಹಿಳೆಯನ್ನು ಶಾಕುಂತಲಾ ಗಾಯ್ಕ್ವಾಡ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಮಹಿಳೆಗೆ ಕರೊನಾ ಪಾಸಿಟಿವ್ ವರದಿಯಾಗಿತ್ತು. ಹೀಗಾಗಿ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಕುಟುಂಬಸ್ಥರು ಬಾರಾಮತಿಯಲ್ಲಿ ಆಸ್ಪತ್ರೆಯೊಂದಕ್ಕೆ ಮೇ 10ರಂದು ದಾಖಲಿಸಿದ್ದು, ಬೆಡ್ಗಾಗಿ ಸಾಕಷ್ಟು ಪ್ರಯತ್ನ ನಡೆಸಿದಾದರೂ ಒಂದೂ ಬೆಡ್ ಸಹ ದೊರೆಯದಿದ್ದಾಗ, ಕಾರಿನಲ್ಲಿ ಆಕೆಯನ್ನು ಇರಿಸಲಾಗಿತ್ತು.
ಈ ಮಧ್ಯೆ ಆಕೆ ಪ್ರಜ್ಞೆಯನ್ನು ಕಳೆದುಕೊಂಡು ಬಹುಶಃ ಆಕೆ ಮೃತಪಟ್ಟಿರಬಹುದೆಂದು ಕುಟುಂಬ ಭಾವಿಸಿ, ತನ್ನ ಕುಟುಂಬಸ್ಥರಿಗೆ ಮಾಹಿತಿ ನೀಡಿ ಅಂತಿಮ ಕ್ರಿಯೆಗೆ ಸಿದ್ಧತೆ ಮಾಡಿಕೊಂಡರು.
ಮನೆಯ ಹಿರಿಯ ಸದಸ್ಯೆಯನ್ನು ಕಳೆದುಕೊಂಡ ದುಃಖದಲ್ಲಿ ಅಂತಿಮ ವಿಧಾನಗಳ ಸಿದ್ಧತೆ ಮಾಡಿಕೊಂಡು ಇನ್ನೇನು ಅಂತ್ಯಕ್ರಿಯೆ ನಡೆಸಬೇಕೆನ್ನುವಷ್ಟರಲ್ಲಿ ಆಕೆ ಅಳುತ್ತಾ, ತನ್ನೆರೆಡು ಕಣ್ಣುಗಳನ್ನು ತೆರೆದು ಎದ್ದು ಕುಳಿತಳು. ಇದರಿಂದ ಶಾಕ್ ಜತೆ ಅಚ್ಚರಿಗೆ ಒಳಗಾದ ಕುಟುಂಬ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು.
ಇದೀಗ ಆಕೆಯನ್ನು ಬಾರಾಮತಿಯ ಸಿಲ್ವರ್ ಜುಬಿಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಒಂದು ಕ್ಷಣ ತಡವಾಗಿದ್ದರೂ ಆಕೆಯನ್ನು ಕುಟುಂಬಸ್ಥರೇ ಜೀವಂತ ಸಮಾಧಿ ಮಾಡಿಬಿಡುತ್ತಿದ್ದರೂ ಈ ಘಟನೆ ಕರೊನಾ ಸೃಷ್ಟಿಸಿರುವ ಭೀಕರತೆಗೂ ಸಾಕ್ಷಿಯಾಗಿದೆ.