ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರಧಾನಿ ಮೋದಿಗೆ ಪತ್ರ ಬರೆದು 5 ಸಲಹೆಗಳನ್ನು ನೀಡಿದ್ದಾರೆ.
ಮನಮೋಹನ್ ಸಿಂಗ್ ನೀಡಿದ ಸಲಹೆಗಳು ಹೀಗಿವೆ..
1. ಕೇಂದ್ರ ಸರ್ಕಾರ ಕೊರೊನಾ ಲಸಿಕೆಯ ಡೋಸ್ಗಾಗಿ ಯಾವೆಲ್ಲಾ ವ್ಯಾಕ್ಸಿನ್ ತಯಾರಕರ ಬಳಿ ಆರ್ಡರ್ ಮಾಡಲಾಗಿದೆ. ಮುಂದಿನ ಆರು ತಿಂಗಳ ಅವಧಿಯಲ್ಲಿ ಯಾರೆಲ್ಲ ಡೋಸ್ ನೀಡಲು ಒಪ್ಪಿದ್ದಾರೆ ಎಂಬುದನ್ನ ಬಹಿರಂಗಗೊಳಿಸಬೇಕು. ನಾವು ವ್ಯಾಕ್ಸಿನೇಷನ್ನ ಗುರಿ ತಲುಪಬೇಕಾದಲ್ಲಿ ಮುಂಚಿತವಾಗಿ ವ್ಯಾಕ್ಸಿನ್ ಡೋಸ್ಗಳಿಗಾಗಿ ಆರ್ಡರ್ ಮಾಡಬೇಕು. ಇದರಿಂದ ಸಮಯಕ್ಕೆ ಸರಿಯಾಗಿ ವ್ಯಾಕ್ಸಿನ್ ತಯಾರಕರು ಲಸಿಕೆ ತಲುಪಿಸುತ್ತಾರೆ.
2. ಸರ್ಕಾರ ಹೇಗೆ ವ್ಯಾಕ್ಸಿನ್ನ್ನು ದೇಶದಾದ್ಯಂತ ತಲುಪಿಸಬೇಕು ಎಂದು ಸೂಚನೆ ನೀಡಬೇಕು. ಸರ್ಕಾರವೇ 10 ಪರ್ಸೆಂಟ್ ವ್ಯಾಕ್ಸಿನ್ ಹಂಚಿಕೆಯನ್ನ ತೆಗೆದುಕೊಂಡು ತುರ್ತು ಇರುವಲ್ಲಿಗೆ ಹಂಚಿಕೆ ಮಾಡುವಂತಾಗಬೇಕು.
3. ರಾಜ್ಯಗಳಿಗೆ ಕೊರೊನಾ ವ್ಯಾಕ್ಸಿನೇಷನ್ ವಿಚಾರದಲ್ಲಿ ಆದ್ಯತಾವಲಯವನ್ನು ಆಯ್ಕೆ ಮಾಡಿಕೊಳ್ಳಲು ಸಡಿಲಿಕೆ ನೀಡಬೇಕು. ಫ್ರಂಟ್ ಲೈನ್ ವರ್ಕರ್ಗಳು 45 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಾಗಿದ್ದರೂ ಅವರಿಗೆ ಲಸಿಕೆ ನೀಡಬೇಕು. ಉದಾಹರಣೆಗೆ ರಾಜ್ಯಗಳು ಸ್ಕೂಲ್ ಟೀಚರ್ಗಳನ್ನು, ಬಸ್ ಅಥವಾ ತ್ರಿಚಕ್ರ ವಾಹನಗಳ ಚಾಲಕರನ್ನು, ಟ್ಯಾಕ್ಸಿ ಡ್ರೈವರ್ಗಳನ್ನು, ಮುನಿಸಿಪಲ್ ಮತ್ತು ಪಂಚಾಯತ್ ಸಿಬ್ಬಂದಿಯನ್ನು ಅಥವಾ ಕೋರ್ಟ್ಗೆ ಹಾಜರಾಗುವ ಲಾಯರ್ಗಳನ್ನು ಫ್ರಂಟ್ ಐನ್ ವರ್ಕರ್ಗಳೆಂದು ಗುರುತಿಸಿ ಅವರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ ಲಸಿಕೆ ನೀಡುವಂತಾಗಬೇಕು.
4. ಕಳೆದ ಕೆಲವು ದಶಕಗಳಲ್ಲಿ ಭಾರತ ಬಹುದೊಡ್ಡ ವ್ಯಾಕ್ಸಿನ್ ತಯಾರಕನಾಗಿ ಬೆಳೆದಿದೆ. ಅದರಲ್ಲೂ ಖಾಸಗಿ ವಲಯಗಳಲ್ಲಿ ಈ ಸಾಮರ್ಥ್ಯ ಹೆಚ್ಚಿದೆ. ಇಂಥ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ವ್ಯಾಕ್ಸಿನ್ ತಯಾರಿಕಾ ಕಂಪನಿಗಳಿಗೆ ಅಗತ್ಯ ನೆರವು ನೀಡಿ ಅವರನ್ನು ಪ್ರೋತ್ಸಾಹಿಸಬೇಕು. ಕಡ್ಡಾಯ ಪರವಾನಗಿ ನಿಬಂಧನೆಗಳನ್ನು ಕಾನೂನಿಗೆ ಸೇರಿಸಲು ಇದು ಉತ್ತಮ ಸಮಯ.
ಇದರಿಂದ ಹಲವು ಕಂಪನಿಗಳು ವ್ಯಾಕ್ಸಿನ್ ತಯಾರಿಕೆಯ ಲೈಸೆನ್ಸ್ ಪಡೆಯಲು ಸಹಾಯವಾಗುತ್ತದೆ. ಈ ಹಿಂದೆ ಹೆಚ್ಐವಿ ಡಿಸೀಸ್ ಸಮಯದಲ್ಲಿ ಮೆಡಿಸಿನ್ ತಯಾರಿಕೆ ವಿಚಾರದಲ್ಲಿ ಹೀಗೆ ಮಾಡಲಾಗಿತ್ತು. ಈಗಾಗಲೇ ಇಸ್ರೇಲ್ ಹೀಗೆ ಕಡ್ಡಾಯ ಪರವಾನಗಿ ನಿಬಂಧನೆಗಳನ್ನು ಕಾನೂನಿಗೆ ಸೇರಿಸಿದೆ.
5. ಪ್ರಾದೇಶಿಕ ಸರಬರಾಜಿಗೆ ಮಿತಿಗಳಿರುವುದರಿಂದ ಯುಎಸ್ಎಫ್ಡಿಎಯಿಂದ ಪರವಾನಗಿ ಪಡೆದ ಯಾವುದೇ ವ್ಯಾಕ್ಸಿನ್ನ್ನು ಭಾರತಕ್ಕೆ ಆಮದು ಮಮಾಡಿಕೊಳ್ಳಬೇಕು.