ಮಂಗಳೂರು: ಕೊರೊನಾ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಣಮೃದಂಗವನ್ನು ಭಾರಿಸುತ್ತಿದೆ. ಜಿಲ್ಲೆಯಲ್ಲಿ ಪ್ರತಿದಿನ ಕೊರೊನಾದಿಂದಾಗಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದು, ಸಾವು ನಿಯಂತ್ರಣ ಮಾಡುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಸಾವು ಮಾತ್ರ ಜಾಸ್ತಿಯಾಗುತ್ತಿದೆ. ಜಿಲ್ಲೆಯಲ್ಲಿನ ಒಟ್ಟು ಸಾವಿನ ಸಂಖ್ಯೆ 890ರ ಗಡಿ ದಾಟಿದೆ. ಅದರಲ್ಲೂ 15 ದಿನಗಳ ಅಂತರದಲ್ಲಿ ಕೊರೊನಾಗೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ.
ಸರಣಿ ಸಾವಿನಿಂದಾಗಿ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಬೆಳ್ತಂಗಡಿ ತಾಲೂಕಿನ ಗಾಂಧಿನಗರದಲ್ಲಿ ವಾಸವಿದ್ದ ಕುಟುಂಬಕ್ಕೆ ಕೊರೊನಾ ಕರಿನೆರಳು ಬೀರಿದ್ದು, ತಂದೆ, ಮಗಳು ಮತ್ತು ಅಳಿಯ ಬಲಿಯಾಗಿದ್ದಾರೆ.
ಕೋವಿಡ್ ಸೋಂಕು ತಗುಲಿದ್ದ ಮನೆಯ ಯಜಮಾನ ಪುರಲ್ಲ (92) ಮೇ.13 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಇದಾದ ನಂತರ ಪುರಲ್ಲರ ಮಗಳು ಅಪ್ಪಿ (45) ಮೇ.23 ರಂದು ಮೃತಪಟ್ಟರು. ಆನಂತರ ಅಪ್ಪಿ ಪತಿ ಗುರುವ (52) ಮೇ.27 ರಂದು ಸೋಂಕಿಗೆ ಬಲಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಭಾಗಶಃ ಎಲ್ಲಾ ಗ್ರಾಮಗಳಿಗೂ ಸೋಂಕು ಹರಡಿಕೊಂಡಿದೆ. ಇದರ ಜೊತೆ ಬ್ಲ್ಯಾಕ್ ಫಂಗಸ್ ಪ್ರಕರಣ ಕೂಡಾ ಜಾಸ್ತಿಯಾಗುತ್ತಿದೆ.