ಕಡಬ: ಯಾವುದೇ ಪರವಾನಿಗೆ ಇಲ್ಲದೇ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕಡಬ ಪೊಲೀಸರು ಕಡಬ ಗ್ರಾಮದ ಕಳಾರದಲ್ಲಿ ಪತ್ತೆ ಹಚ್ಚಿದ್ದು ಮರಳು ಹಾಗೂ ಸಾಗಾಟಕ್ಕೆ ಬಳಸುತ್ತಿದ್ದ ಪಿಕಪ್ ವಾಹನ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
ಕಡಬ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅಭಿನಂದನ್ ಎಂ.ಎಸ್., ಹಾಗೂ ಸಿಬ್ಬಂದಿಗಳು ಜ.2ರಂದು ಸಂಜೆ ಕಡಬ ಗ್ರಾಮದ ಕಳಾರ ಎಂಬಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡಬ ಕಡೆಗೆ ಬರುತ್ತಿದ್ದ ಕೆಎ 21, 8663ನೇ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಮರಳು ಇರುವುದು ಕಂಡು ಬಂದಿರುತ್ತದೆ.
ಈ ಬಗ್ಗೆ ಪಿಕಪ್ ವಾಹನದ ಚಾಲಕ ಆರೋಪಿ ಕುಂತೂರು ನಿವಾಸಿ ಸಾದಿಕ್ ಎಂಬವರಲ್ಲಿ ವಿಚಾರಿಸಿದಾಗ, ಯಾವುದೇ ಪರವಾನಿಗೆ ಇಲ್ಲದೇ ಕುಂತೂರು ನಿವಾಸಿ ಸುರೇಶ್ ಎಂಬವರ ಸಹಾಯದಿಂದ ಕುಂತೂರುಪದವು ಎಂಬಲ್ಲಿ ಹರಿಯವ ನದಿಯಿಂದ ಮರಳನ್ನು ಕಳವು ಮಾಡಿ, ಮಾರಾಟಕ್ಕಾಗಿ ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ. ಮುಂದಿನ ಕಾನೂನು ಕ್ರಮಕ್ಕಾಗಿ ಪಿಕಪ್ ವಾಹನ ಮತ್ತು ಪಿಕಪ್ ವಾಹನದಲ್ಲಿದ್ದ ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.