- Advertisement -
- Advertisement -
ನವದೆಹಲಿ : ದೇಶದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ತನ್ನು ಗ್ರಾಹಕರ ಹಕ್ಕು ಎಂದು ಪರಿಗಣಿಸಲು ಕೇಂದ್ರ ಸರ್ಕಾರ ನಿಯಮಾವಳಿ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಇದು ಜಾರಿಗೆ ಬಂದರೆ ವಿದ್ಯುತ್ ಪಡೆಯುವುದು ಈ ದೇಶದಲ್ಲಿರುವ ಎಲ್ಲರ ಹಕ್ಕಾಗಲಿದೆ. ಆಗ, ಅರ್ಜಿ ಸಲ್ಲಿಸಿದ ನಿರ್ದಿಷ್ಟಸಮಯದೊಳಗೆ ಇಂಧನ ಇಲಾಖೆ ವಿದ್ಯುತ್ ಸಂಪರ್ಕ ನೀಡಬೇಕಾಗುತ್ತದೆ. ಅಲ್ಲದೆ, ವಿದ್ಯುತ್ ಗ್ರಾಹಕರ ಎಲ್ಲಾ ಸಮಸ್ಯೆಗಳನ್ನೂ ನಿರ್ದಿಷ್ಟಸಮಯದೊಳಗೆ ಆನ್ಲೈನ್ನಲ್ಲೇ ಬಗೆಹರಿಸಬೇಕಾಗುತ್ತದೆ.

ಈ ಸಂಬಂಧ ಕೇಂದ್ರ ಇಂಧನ ಇಲಾಖೆಯು ಕರಡು ನಿಯಮಾವಳಿ ರೂಪಿಸಿದ್ದು, ಅದಕ್ಕೆ ಈ ವರ್ಷದ ಸೆ.30ರೊಳಗೆ ಜನರಿಂದ ಆಕ್ಷೇಪಣೆ ಆಹ್ವಾನಿಸಿದೆ. ನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮವಾಗಿ ‘ವಿದ್ಯುತ್ (ಗ್ರಾಹಕರ ಹಕ್ಕು) ನಿಯಮಾವಳಿ-2020’ನ್ನು ಪ್ರಕಟಿಸಲಿದೆ.
ನಿಯಮಗಳಲ್ಲಿ ಏನಿದೆ?

- ಎಲ್ಪಿಜಿ ರೀತಿಯಲ್ಲೇ ಗ್ರಾಹಕರ ಬ್ಯಾಂಕ್ ಖಾತೆಗೆ ನೇರ ಸಬ್ಸಿಡಿ ಹಣ ಜಮೆ.
- ಜನರು ಕೇವಲ 2 ದಾಖಲೆ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಲು ಸರಳ ವ್ಯವಸ್ಥೆ ಇರಬೇಕು.
- ಮೆಟ್ರೋ ನಗರಗಳಲ್ಲಿ ಜನರು ಅರ್ಜಿ ಸಲ್ಲಿಸಿದ 7 ದಿನ, ಮುನ್ಸಿಪಲ್ ಪಟ್ಟಣಗಳಲ್ಲಿ 15 ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ 30 ದಿನದೊಳಗೆ ವಿದ್ಯುತ್ ಸಂಪರ್ಕ ನೀಡಬೇಕು ಅಥವಾ ಈಗಾಗಲೇ ನೀಡಿರುವ ಸಂಪರ್ಕವನ್ನು ಬದಲಿಸಿಕೊಡಬೇಕು.
- ಒಂದು ವರ್ಷಕ್ಕೆ ಒಬ್ಬ ಗ್ರಾಹಕನಿಗೆ ಗರಿಷ್ಠ ಇಷ್ಟೇ ಸಲ ಹಾಗೂ ಇಷ್ಟುತಾಸು ಮಾತ್ರ ವಿದ್ಯುತ್ ಕಡಿತಗೊಳಿಸಬಹುದು ಎಂಬ ಮಿತಿ ಇರಬೇಕು.
- ಹೊಸ ಸಂಪರ್ಕ, ವರ್ಗಾವಣೆ, ರಿಪೇರಿ, ವಿದ್ಯುತ್ ಕಡಿತ ಇತ್ಯಾದಿ ಸಮಸ್ಯೆಗಳನ್ನು ಗ್ರಾಹಕರು ಬಗೆಹರಿಸಿಕೊಳ್ಳಲು ಆಯಪ್ ಆಧಾರಿತ ವ್ಯವಸ್ಥೆ ತರಬೇಕು.

- Advertisement -