ವಿಟ್ಲ: ಕರ್ನಾಟಕ ಕೇರಳ ಗಡಿ ಭಾಗದ ಸಾಲೆತ್ತೂರು ಕೊಡಂಗೆಯ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆಯ ವೇಳೆ ವಿಟ್ಲ ಪೊಲೀಸ್ ಉಪನಿರೀಕ್ಷಕರನ್ನೊಳಗೊಂಡ ತಂಡದ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದ ಡಿ ಗ್ಯಾಂಗ್ ಮುಖ್ಯಸ್ಥ ಸೇರಿ ನಾಲ್ಕು ಮಂದಿ ಕುಖ್ಯಾತರನ್ನು ಪೆರಾಜೆ ಗ್ರಾಮದ ಬುಡೋಳಿಯಲ್ಲಿ ಬಂಧಿಸಿದ್ದಾರೆ.
ಡಿ ಗ್ಯಾಂಗ್ ಮುಖ್ಯಸ್ಥ ಎಂದು ಗುರುತಿಸಿಕೊಂಡ ಮೀಯಪದವು ಮೂಡಂಬೈಲು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ (೨೫), ಮಹಾರಾಷ್ಟ್ರ ಜಲಗಾವ್ ಮುಕುಂದ ನಗರ ನಿವಾಸಿ ರಾಕೇಶ್ ಕಿಶೋರ್ ಬಾವಿಸ್ಕರ್ ಯಾನೆ ರಾಕಿ ಯಾನೆ ರಾಕಿ ಬಾಯ್ (೨೭), ಡಿ ಗ್ಯಾಂಗ್ ಸದಸ್ಯರಾದ ಕಡಂಬಾರು ಬಟ್ಯಪದವು ನಿವಾಸಿ ಮಹಮ್ಮದ್ ಫಯಾಝ್ ಯಾನೆ ಕೂವ ಫಯಾಝ್ (೨೨), ಮಂಗಲ್ಪಾಡಿ ಸೋಂಕಾಳ್ ನಿವಾಸಿ ಹೈದರ್ ಅಲಿ ಯಾನೆ ಹೈದರ್ (೨೦) ಬಂಧಿತ ಆರೋಪಿಗಳಾಗಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 7.65 ಎಂಎಂ ಪಿಸ್ತೂಲ್ – 3, ನಾಡ ಕೊವಿ – 1, ಸಜೀವ ಮದ್ದುಗುಂಡು -13, ಕಾರು -1ನ್ನು ವಶ ಪಡೆದುಕೊಳ್ಳಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ದ. ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ. ವೆಲೆಂಟನ್ ಡಿಸೋಜ್ ರವರ ನಿರ್ದೇಶನದಂತೆ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣೆಯ ಉಪನಿರೀಕ್ಷಕ ವಿನೋದ್ ರೆಡ್ಡಿ, ಎ ಎಸ್ ಐ ಕರುಣಾಕರ್, ಸಿಬ್ಬಂದಿಗಳಾದ ಪ್ರಸನ್ನ, ಗಿರೀಶ್, ಪ್ರತಾಪ, ವಿನಾಯಕ, ಲೋಕೇಶ್, ಹೇಮರಾಜ್, ನಝೀರ್, ವಿವೇಕ್, ಪ್ರವೀಣ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕುವ ಫಯಾಝ್ ಮೇಲೆ ಕೇರಳದ ಮಂಜೇಶ್ವರ ಠಾಣೆಯಲ್ಲಿ ಹಲ್ಲೆ, ದೊಂಬಿ, ಕೊಲೆಯತ್ನ, ಅಕ್ರಮ ಶಸಸ್ತ್ರ ಬಳಕೆ, ಕುಂಬಳೆ ಕೊಲೆಯತ್ನ, ಆಂದ್ರದಲ್ಲಿ ಗಾಂಜಾ ಪ್ರಕರಣ ಸೇರಿ ೧೧ ಪ್ರಕರಣದಲ್ಲಿ ಹೊರ ರಾಜ್ಯದ ಪೊಲೀಸರಿಗೆ ಅಗತ್ಯವಾಗಿದ್ದ. ರಹೀಂ ಮೇಲೆ ಮಂಜೇಶ್ವರ ಅಕ್ರಮ ಶಸಸ್ತ್ರ ಬಳಕೆ, ಗಾಂಜಾ ಸಾಗಾಟ ಪ್ರಕರಣ, ಕೊಲೆ ಯತ್ನ, ಅಪಹರಣ ಪ್ರಕರಣ, ಚಿಕ್ಕಂಗಳೂರು ಗಾಂಜಾ ಪ್ರಕರಣ ಸೇರಿ ೧೧ ಪ್ರಕರಣ ಈತನ ಮೇಲಿದೆ.
ಘಟನೆಯ ದಿನವೇ ವಶಕ್ಕೆ: ಕೇರಳ ಮಂಜೇಶ್ವರ ಮಂಗಲ್ಪಾಡಿ ಬೈತಿಲ ನಿವಾಸಿ ಅಬ್ದುಲ್ ಲತೀಫ್ ಯಾನೆ ಲತ್ತಿ ಯಾನೆ ಲತೀಫ್ (೨೩), ಮೀಂಜ ಮೀಯಪದವು ಬೆಚ್ಚಂಗಳ ನಿವಾಸಿ ಮಹಮ್ಮದ್ ಶಾಕೀರ್ ಯಾನೆ ಶಾಕೀರ್ (೨೬), ಮೂಡಂಬೈಲು ಅಡ್ಕಂತಗುರಿ ನಿವಾಸಿ ಮಹಮ್ಮದ್ ಅಶ್ವಕ್ ಯಾನೆ ಅಸ್ಪಾಕ್ (೨೫) ಬಂಧಿಸಿ, ಒಂದು ಕಾರು, ಒಂದು ಪಿಸ್ತೂಲ್, ೧೩ ಸಜೀವ ಗುಂಡು, ೧ ಡ್ರಾಗನ್, ೧ ಕೊಡಲಿ, ೧ ಚೂರಿ, ಎಲ್. ಎಸ್. ಡಿ ಹಾಗೂ ಎಂ. ಡಿ. ಎಂ. ಎ. ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು