ದಾವಣಗೆರೆ: ಅನಾಥ ಹೆಣ್ಣುಮಕ್ಕಳನ್ನು ಪುಸಲಾಯಿಸಿ ಇಬ್ಬರು ಯುವಕರು ಮದುವೆಯಾಗಿದ್ದು, ಇದೀಗ ಆ ಇಬ್ಬರು ಯುವಕರ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ತಂದೆ ಎರಡು ವರ್ಷದ ಹಿಂದೆ ಮೃತಪಟ್ಟಿದ್ದು, ತಾಯಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಈ ದಂಪತಿಗೆ ನಾಲ್ವರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗ ಇದ್ದು, ಈ ಐದು ಮಕ್ಕಳನ್ನು ಕಣ್ಣು ಕಾಣದ ಅಜ್ಜಿ ಸಾಕಿದ್ದರು.
ದೊಡ್ಡವಳಿಗೆ 15 ವರ್ಷವಾಗಿದ್ದು, ಅವಳನ್ನು ಎರಡು ತಿಂಗಳ ಹಿಂದೆ ಪರಿಚಿತ ಯುವಕನೊಬ್ಬ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆ ಆಗಿದ್ದನು. ಆ ಯುವಕನ ಪಕ್ಕದ ಮನೆಯ ಮತ್ತೊಬ್ಬ ಯುವಕ 13 ವರ್ಷದ ಬಾಲಕಿಯನ್ನು ಇದೀಗ ಮದುವೆಯಾಗಿದ್ದು, ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಸಹಿತ ಅಧಿಕಾರಿಗಳು ಆ ಮನೆಗೆ ಭೇಟಿ ನೀಡಿದ್ದಾರೆ. ಇಬ್ಬರು ಯುವಕರು ತಪ್ಪಿಸಿಕೊಂಡಿದ್ದಾರೆ.
ಎಲ್ಲ ಐದು ಮಕ್ಕಳನ್ನು ಸುಪರ್ದಿಗೆ ತೆಗೆದುಕೊಂಡಿದ್ದೇವೆ. ಬಾಲ ಮಂದಿರಕ್ಕೆ ಕಳುಹಿಸಿದ್ದೇವೆ. ಅಪಹರಣ, ಬಾಲ್ಯವಿವಾಹ, ಅತ್ಯಾಚಾರ ಪ್ರಕರಣ ದಾಖಲಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿವೆ.