ಬೆಳ್ತಂಗಡಿ ತಾಲೂಕು ನಿಟ್ಟಡೆ ಗ್ರಾಮದ ಪೆರ್ಮುಡ ಬಳಿ ವಾಹನವೊಂದರಲ್ಲಿ ಅಕ್ರಮವಾಗಿ ಗೋವು ಸಾಗಿಸುತ್ತಿದ್ದಾಗ ವೇಣೂರು ಪೊಲೀಸರು ಕಾರ್ಯಾಚರಣೆ ನಡೆಸಿ ಗೋವನ್ನು ರಕ್ಷಿಸಿದ್ದು, ಮಾರುತಿ 800 ಕಾರನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿರುವ ವೇಳೆ ಖಚಿತ ಮಾಹಿತಿ ಸಿಕ್ಕಿದೆ. ಅಳದಂಗಡಿಯಿಂದ ನೀಲಿ ಬಣ್ಣದ ಮಾರುತಿ 800 ಕಾರಿನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದು, ವೇಗವಾಗಿ ಬಂದ ಕಾರನ್ನು ಸಿಬ್ಬಂದಿಗಳು ನಿಲ್ಲಿಸಲು ಸೂಚಿಸಿದ್ದರು. ಈ ವೇಳೆ ಆರೋಪಿಗಳು ವಾಹನ ನಿಲ್ಲಿಸದೇ ಮುಂದಕ್ಕೆ ಹೋಗಿದ್ದು, ಪೊಲೀಸರು ಜೀಪಿನಲ್ಲಿ ಸುಮಾರು ½ ಕಿಮೀ ಬೆನ್ನಟ್ಟಿ ಹೋದಾಗ ಆರೋಪಿಗಳು ಕಾರನ್ನು ರಸ್ತೆ ಬದಿ ನಿಲ್ಲಿಸಿ ಪಕ್ಕದ ಗುಡ್ಡೆಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಆರೋಪಿಗಳನ್ನು ಉಳ್ತೂರು ವಾಸಿ ಯಾಸಿರ್ ಮತ್ತು ಹುಣ್ಸೆಪಲ್ಕೆ ವಾಸಿ ಇಬ್ರಾಹಿಂ ಖಲೀಲ್ ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಗೋವನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು ಗೋವನ್ನು ರಕ್ಷಿಸಿದ್ದಾರೆ. ಸಾಗಾಟ ಮಾಡಲು ಉಪಯೋಗಿಸಿದ ಕಾರು ವಶಕ್ಕೆ ಪಡೆದಿದ್ದು ಕಾರಿನ ಬೆಲೆ ಸುಮಾರು ರೂ- 45,000ರೂ ಎಂದು ಅಂದಾಜಿಸಲಾಗಿದೆ. ಈ ಪ್ರಕರಣ ವೇಣೂರು ಠಾಣೆಯಲ್ಲಿ ದಾಖಲಾಗಿದೆ.