





ಶಿವಮೊಗ್ಗ: ತೀರ್ಥಹಳ್ಳಿಯ ತುಂಗಾ ನದಿಯಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ.ಮೃತನನ್ನು ಸೀಬಿನಕೆರೆಯ ಅಕ್ಷಯ್ (26) ಎಂದು ಗುರುತಿಸಲಾಗಿದೆ. ಇವರು ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ಮಂಗಳವಾರ ಸಂಜೆ ಅಕ್ಷಯ್ ನದಿಗೆ ಈಜಲು ತೆರಳಿದ್ದು, ನದಿತಟದ ಕಲ್ಲು ಬಂಡೆಯ ಮೇಲೆ ಬಟ್ಟೆ, ಚಪ್ಪಲಿ ಮತ್ತು ಮೊಬೈಲ್ ಇಟ್ಟು ನೀರಿಗೆ ಇಳಿದಿದ್ದರು. ಬಹಳ ಸಮಯವಾದರೂ ವಾಪಸ್ ಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಗೊಂಡಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅವರ ತಂಡ ಬುಧವಾರ ಬೆಳಿಗ್ಗೆ ತೀವ್ರ ಶೋಧ ಕಾರ್ಯ ನಡೆಸಿ, ಯುವಕ ನದಿಗೆ ಇಳಿದಿದ್ದ ಸ್ಥಳದ ಸಮೀಪದಲ್ಲೇ ಮೃತದೇಹವನ್ನು ಪತ್ತೆಹಚ್ಚಿದರು.ಮೃತ ಅಕ್ಷಯ್ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯು ಬೇರೆಯವರ ಹೆಸರಿನಲ್ಲಿ ನೋಂದಾಯಿತವಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








