ನಾಡಿನೆಲ್ಲೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು, ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ದೀಪಾವಳಿ ಆಚರಿಸಲಾಗುತ್ತಿದೆ. ವಿಭಿನ್ನ ಸಂಸ್ಕೃತಿಯನ್ನು ಹೊಂದಿರುವ ತುಳುನಾಡಿನಲ್ಲಿ ದೀಪಾವಳಿಯನ್ನು ತುಳುನಾಡನ್ನು ಆಳಿದ ಬಲಿ ಚಕ್ರವರ್ತಿಯನ್ನು ಆಹ್ವಾನಿಸುವ ಹಬ್ಬವಾಗಿ ಆಚರಿಸಲಾತ್ತದೆ. ಬಲೀಂದ್ರನಿಗಾಗಿ ಮನೆ ಬಾಗಿಲಿಗೆ ಹಾಗೂ ದಾರಿಯುದ್ದಕ್ಕೂ ದೀಪಗಳನ್ನು ಜೋಡಿಸುವ ತುಳುವರು ದೀಪಾವಳಿಯಂದು ಬಲೀಂದ್ರ ಮರವನ್ನು ನೆಡುವುದು ಇಲ್ಲಿ ಬೆಳೆದುಬಂದ ಸಂಪ್ರದಾಯವೂ ಆಗಿದೆ.
ದೀಪಾವಳಿಯನ್ನು ನಾಡಿನೆಲ್ಲೆಡೆ ಮೂರು ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುತ್ತದೆ. ಉತ್ತರ ಭಾರತ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ದೀಪಾವಳಿಯನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಅತ್ಯಂತ ವಿಭಿನ್ನ ಸಂಸ್ಕೃತಿ -ಸಂಪ್ರದಾಯಗಳನ್ನು ಹೊಂದಿರುವ ತುಳುನಾಡಿನಲ್ಲಿ ತುಳುನಾಡನ್ನು ಆಳಿದ ರಾಜನನ್ನು ಆಹ್ವಾನಿಸುವ ಉದ್ಧೇಶದಿಂದ ಆಚರಿಸಲಾಗುತ್ತದೆ.
ಈ ಕಾರಣಕ್ಕಾಗಿಯೇ ದೀಪಾವಳಿಯಂದು ತುಳಸೀಕಟ್ಟೆಯ ಬಳಿಯಲ್ಲಿ ಪಾಲಸ ಮರದ ಕೊಂಬೆಯನ್ನು ನೆಟ್ಟು, ಅದಕ್ಕೆ ಕಾಡಿನಲ್ಲಿ ಸಿಗುವ ಹೂಗಳಿಂದ ಶೃಂಗಾರ ಮಾಡಿ ಬಲೀಂದ್ರ ಹೂ ಎಂದು ಕರೆಯುತ್ತಾರೆ. ದೀಪಾವಳಿ ಹಬ್ಬದಲ್ಲೂ ಕೃಷಿಯನ್ನು ಜೋಡಿಸಿಕೊಂಡಿರುವ ತುಳುವರು ಭೂಮಿ ಪೂಜೆಯ ಜೊತೆಗೆ ತಾವು ಬೆಳೆದ ಧವಸ-ಧಾನ್ಯಗಳಿಗೂ ಪೂಜೆ ನೆರವೇರಿಸುವುದು ಇಲ್ಲಿನ ವಿಶೇಷತೆಯಾಗಿದೆ.