



ಬೆಳ್ತಂಗಡಿ; ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆ ಮುಂದುವರಿದಿದೆ. ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಬುಧವಾರ ಮುಕ್ತಾಯವಾಗುತ್ತಿದ್ದು, ಬುಧವಾರ ಆತನನ್ನು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಎಸ್.ಐ.ಟಿ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ.
ಸಾಕ್ಷಿ ದೂರುದಾರನಾಗಿ ಬಂದಿದ್ದ ಚಿನ್ನಯ್ಯನನ್ನು ಆ. 23 ರಂದು ಎಸ್.ಐ.ಟಿ ತಂಡ ಆತ ತಂದಿದ್ದ ಬುರುಡೆಯ ವಿಚಾರದಲ್ಲಿ ಬಂಧಿಸಿದ್ದರು. ಅದೇ ದಿನ ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆ.3 ರ ವರೆಗೆ ಆತನನ್ನು ಎಸ್.ಐ.ಟಿ ವಶಕ್ಕೆ ಒಪ್ಪಿಸಿ ಆದೇಶ ನೀಡಿತ್ತು.
ಆರೋಪಿಯನ್ನು ವಶಕ್ಕೆ ಪಡೆದ ಎಸ್.ಐ.ಟಿ ತಂಡ ಮಹೇಶ್ ಶೆಟ್ಟಿ ಮನೆ, ಜಯಂತ್ ಟಿ ಮನೆ ಸೇರಿದಂತೆ ಆತ ಉಳಿದುಕೊಂಡಿದ್ದ ಲಾಡ್ಜ್ ಗಳಲ್ಲಿಯೂ ಆತನನ್ನು ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಿತ್ತು. ಇದೀಗ ಚಿನ್ನಯ್ಯನ ಕಸ್ಟಡಿ ಅವಧಿ ಮುಗಿದಿದ್ದು ಸೆ.3ರಂದು ಸಾಕ್ಷಿ ದೂರುದಾರ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದೆ.
ಬುರುಡೆಯ ಬಗ್ಗೆ ವಿಚಾರಣೆಯ ವೇಳೆ ಹಲವಾರು ವಿಚಾರಗಳನ್ನು ಸಾಕ್ಷಿದೂರುದಾರ ಚಿನ್ನಯ್ಯ ಎಸ್.ಐ.ಟಿ ಮುಂದೆ ಇಟ್ಟಿರುವುದಾಗಿ ತಿಳಿದು ಬಂದಿದ್ದು, ಇನ್ನೂ ಹಲವು ಸ್ಥಳಗಳಲ್ಲಿ ಮಹಜರು ಪ್ರಕ್ರಿಯೆ ನಡೆಯಲಿರುವುದಾಗಿ ತಿಳಿದು ಬಂದಿದೆ.
ಈ ಹಿನ್ನಲೆಯಲ್ಲಿ ಸಾಕ್ಷಿ ದೂರುದಾರನನ್ನು ಎಸ್.ಐ.ಟಿ ತಂಡ ಮತ್ತೆ ವಶಕ್ಕೆ ನೀಡುವಂತೆ ನ್ಯಾಯಾಲಯದ ಮುಂದೆ ಬೇಡಿಕೆ ಸಲ್ಲಿಸುವ ಸಾಧ್ಯತೆಯಿದೆ.








