



ಧರ್ಮಸ್ಥಳ ಪ್ರಕರಣದ ಕೇಂದ್ರವಾಗಿರುವ ಮುಸುಕುಧಾರಿ ಅನಾಮಿಕ ವ್ಯಕ್ತಿ ಎಸ್ಐಟಿ ಬಳಿ ತನಗೆ ಪೊಲೀಸ್ ಭದ್ರತೆ ನೀಡುವಂತೆ ಕೋರಿಕೆ ಸಲ್ಲಿಸಿದ್ದಾರೆ. ಬುಧವಾರ ಧರ್ಮಸ್ಥಳದಲ್ಲಿ ಯೂಟ್ಯೂಬರ್ಗಳ ಮೇಲೆ ಹಲ್ಲೆ ಮಾಡಿದ ಬಳಿಕ ತುಸು ಉದ್ವಿಗ್ನ ವಾತಾವರಣವಿದೆ.
ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದ ಘರ್ಷಣೆಯ ಬಳಿಕ ದೂರುದಾರನಿಂದ ಈ ವಿಶೇಷ ಮನವಿ ಬಂದಿದೆ. ನನ್ನ ಮೇಲೂ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಪೊಲೀಸ್ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದಾರೆ.
ಗುರುವಾರದ ವಿಚಾರಣೆಯ ಸಂದರ್ಭದಲ್ಲಿ ದೂರುದಾರನ ಪರ ವಕೀಲರು ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ಪೊಲೀಸ್ ಭದ್ರತೆ ನೀಡಬೇಕೆಂದು ಲಿಖಿತ ಮನವಿ ಮಾಡಿದ್ದಾರೆ.
ಶೋಧ ಮುಕ್ತಾಯದ ನಂತರವೂ ನನಗೆ ಪೊಲೀಸ್ ಭದ್ರತೆ ನೀಡಬೇಕೆಂದು ಎಸ್ಐಟಿ ಎಸ್.ಪಿ ಜಿತೇಂದ್ರ ದಯಾಮ್ ಮುಂದೆ ಮನವಿ ಮಾಡಿದ್ದಾರೆ. ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಶುಕ್ರವಾರ ದೂರುದಾರ ಆಗಮಿಸಿದ್ದಾರೆ. ದೂರುದಾರ ಆಗಮಿಸಿದ ಖಾಸಗಿ ಕಾರಿಗೂ ಪೊಲೀಸ್ ಕಾವಲು ಇದೆ. ಪೊಲೀಸ್ ವಾಹನದಲ್ಲಿದ್ದ ಚಾಲಕ ಸಹಿತ ಇಬ್ಬರು ಸಿಬ್ಬಂದಿಯನ್ನು ಕಾವಲು ಕಾಯಲು ನಿಯೋಜನೆ ಮಾಡಲಾಗಿದೆ.
ಇಂದು (ಆ.8) ದೂರುದಾರನ ಮಾಸ್ಕ್ ಚೇಂಜ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಗೋಂಕ್ರಾಥಾರ್ ಭಾಗದಲ್ಲಿ ದೂರುದಾರ ಸ್ಪಾಟ್ ಮಾರ್ಕಿಂಗ್ ಮಾಡಿದ್ದಾನೆ. ಮಾರ್ಕಿಂಗ್ ಮಾಡಿದ ಜಾಗಕ್ಕೆ ಸಿಬ್ಬಂದಿಗಳು ಹಾರೆ, ಗುದ್ದಲಿ, ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಸ್ಥಳಕ್ಕೆ ಎಸಿ ಸ್ಟೆಲ್ಲಾ ವರ್ಗೀಸ್, ಎಸ್ಪಿ ಜಿತೇಂದ್ರ ಕುಮಾರ್ ದಯಾಮಾ, ಎಸ್ ಎಸ್ ಎಲ್, ಸೋಕೋ, ಪೊಲೀಸರು ಒಳಗೊಂಡ ಎಸ್ಐಟಿ ತಂಡ ಭೇಟಿ ನೀಡಿದ್ದು, ಸ್ಥಳಕ್ಕೆ ಯಾರೂ ಹೋಗದಂತೆ ಬಿಗಿ ಪೊಲೀಸ್ ಭದ್ರತೆಯನ್ನು ಮಾಡಲಾಗಿದೆ. ಸ್ಥಳದಲ್ಲಿ ಸುಮಾರು 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.








