ಮಂಗಳೂರು: ಕ್ಯಾನ್ಸರ್ ಬಂದರೆ ತಲೆಯನ್ನು ಬೋಳಿಸಲೇ ಬೇಕು. ಆಗ ರೋಗಿಗಲು ಅನುಭವಿಸುವ ಕಷ್ಟ ಹೇಳತೀರದು. ಇದಕ್ಕೆಂದೇ ಕೆಲವರು ತಮ್ಮ ಕೂದಲನ್ನು ವಿಗ್ ತಯಾರಿಸಲು ದಾನ ಮಾಡುತ್ತಾರೆ. ಇಲ್ಲೊಬ್ಬಳು ಬಾಲಕಿ ಕೇಶ ದಾನ ಮಾಡಿದ್ದಾಳೆ.
ಮಂಗಳೂರಿನ ಎಕ್ಕೂರಿನ ಮಂಗಳೂರು ಕೇಂದ್ರೀಯ ವಿದ್ಯಾಲಯ-2ರ 6ನೇ ತರಗತಿ ವಿದ್ಯಾರ್ಥಿನಿ ಡಿಲ್ನಾ ರಾಜೇಶ್ (11) ಕೇಶದಾನ ಮಾಡಿದ್ದಾರೆ. ತನ್ನ 9ನೇ ವಯಸ್ಸಿನಲ್ಲಿ ರೈಲು ಪ್ರಯಾಣದ ವೇಳೆ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವ ಕೂದಲು ಉದುರಿದ ರೋಗಿಗಳನ್ನು ಕಂಡಾಗ ಮನಕಲುಕಿದೆ. ಅವರಿಗೆ ತಾನೂ ನೆರವಾಗಬೇಕೆಂಬ ನಿರ್ಧಾರಕ್ಕೆ ಬಂದು ಸೆ. 22 ರಂದು ಕೇಶದಾನ ಮಾಡಿದ್ದಾರೆ. 2 ವರ್ಷಗಳಿಂದ ಕೂದಲನ್ನು ಕಾಳಜಿಯಿಂದ ಬೆಳೆಸಿದ್ದರು. ಹುಟ್ಟಿದ ದಿನವಾದ ಜ. 14ರಂದು ಕೇಶದಾನ ಮಾಡುವುದೆಂದು ನಿಗದಿಯಾಗಿದ್ದರೂ ಕೋವಿಡ್ ಕಾರಣ ಸಾಧ್ಯವಾಗಿರಲಿಲ್ಲ.
ಬಡ ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಿ ನೀಡುವ ತೃಶ್ಶೂರ್ನ ಮಿರಾಕಲ್ ಚಾರಿಟೆಬಲ್ ಅಸೋಸಿ ಯೇಶನ್ ನೇತೃತ್ವದ ಹೇರ್ ಬ್ಯಾಂಕ್ಗೆ ಕೂದಲನ್ನು ನೀಡಲಾಗಿದೆ. ಮತ್ತೆ ಕೂದಲು ಬೆಳೆದಾಗ ಇನ್ನೊಮ್ಮೆ ನೀಡಲು ಡಿಲ್ನಾ ನಿರ್ಧರಿಸಿದ್ದಾರೆ. ಈಕೆ ಪತ್ರಕರ್ತ ರಾಜೇಶ್ ಕುಮಾರ್ ಕಾಂಕೋಲ್ ಮತ್ತು ಯೇನಪೊಯ ಕಾಲೇಜಿನ ಉಪನ್ಯಾಸಕಿ ಕೆ.ಎಂ. ಜಮುನಾ ದಂಪತಿಯ ಪುತ್ರಿ. ಕಣ್ಣೂರು ಜಿಲ್ಲೆಯ ಪಯ್ಯನೂರಿನವರಾದ ಅವರು ಪ್ರಸ್ತುತ ಎಕ್ಕೂರಿನಲ್ಲಿ ನೆಲೆಸಿದ್ದಾರೆ.