ಮಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರತಿಪಕ್ಷಗಳ ನಾಯಕರು ಸಹ ಈ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆಯನ್ನ ನೀಡಿದ್ದಾರೆ.
ಒಳ್ಳೆಯ ಸರ್ಕಾರ ಕೊಡಲು ಆಗದ ಕಾರಣ ಮುಖ್ಯಮಂತ್ರಿ ಬದಲಾವಣೆ ಆಗ್ತಿದೆ, ಎರಡು ವರ್ಷದಲ್ಲಿ ಡಬಲ್ ಇಂಜಿನ್ ಸರ್ಕಾರ ಇಟ್ಟುಕೊಂಡು ಒಳ್ಳೆ ಆಡಳಿತ ಕೊಡಲು ಇವರಿಂದ ಸಾಧ್ಯವಾಗಿಲ್ಲ. ಆಡಳಿತ ಸರಿ ಇಲ್ಲ, ಅಧಿಕಾರಿಗಳಿಂದ ಹಿಡಿದು ಗ್ರಾ.ಪಂ, ವಿಧಾನಸೌಧದವರೆಗೆ ಯಾರೂ ಮಾತು ಕೇಳ್ತಿಲ್ಲ. ಈಗ ತರಾತುರಿಯಲ್ಲಿ ಅನುದಾನ ಬಿಡುಗಡೆಯಾಗ್ತಿದೆ, ಫೈಲ್ಗಳಿಗೆ ಸಹಿ ಆಗ್ತಿದೆ. ನೀರಾವರಿ ಇಲಾಖೆ ಸೇರಿ ಬೇರೆ ಬೇರೆ ಇಲಾಖೆಯ ಫೈಲ್ಗಳು ಕ್ಲಿಯರ್ ಆಗ್ತಿದೆ ಈ ಸರ್ಕಾರಕ್ಕೆ ಗೌರವ ಎಲ್ಲಿದೆ ಎಂದರು.
ಬಜೆಟ್ನಲ್ಲಿ ಎಷ್ಟು ದುಡ್ಡು ಇಟ್ಟಿದ್ರೀ? ಈಗ ಎಷ್ಟು ಕ್ಲಿಯರ್ ಆಗ್ತಿದೆ? ಎರಡು ವರ್ಷದಿಂದ ಎಷ್ಟಾಗಿದೆ? ಎಂದು ಪ್ರಶ್ನೆಮಾಡಿದ ಡಿಕೆ ಶಿವಕುಮಾರ್ ಈ ಬಗ್ಗೆ ಅಸೆಂಬ್ಲಿಯಲ್ಲಿ ದಾಖಲೆ ಸಮೇತ ನಾನು ಮಾತನಾಡ್ತೇನೆ. ಹಣಕಾಸು ಇಲಾಖೆ ದುಡ್ಡಿಲ್ಲ ಅಂತ ಪ್ರಾಜೆಕ್ಟ್ ಕ್ಲಿಯರ್ ಆಗ್ತಿರಲಿಲ್ಲ, ಈಗ ದುಡ್ಡು ಎಲ್ಲಿಂದ ಬಂತು? ಇವೆಲ್ಲಾ ಕೂಡ ದೊಡ್ಡ ಚರ್ಚೆಯಾಗಬೇಕು, ಇದನ್ನ ನಾನು ಚರ್ಚೆ ಮಾಡ್ತೀನಿ ಎಂದು ಗರಂಮಾಗಿ ನುಡಿದ್ದಿದ್ದಾರೆ.
ಕಾಂಗ್ರೆಸ್ಗೆ ಯಾರಾದ್ರೂ ಬರೋರಿದ್ರೆ ಅರ್ಜಿ ಹಾಕಲಿ, ಆ ಮೇಲೆ ಕೂತು ಮಾತನಾಡೋಣ, ಈಗ ಇದರ ಬಗ್ಗೆ ಸುಮ್ಮನೆ ಮಾತನಾಡಲ್ಲ, ಇರೋರು ಬರ್ತಾರೆ ಅನ್ನೋದಲ್ಲ, ಯಾವುದೇ ಇದ್ದರೂ ಪಕ್ಷದ ಕಾನೂನಿನಡಿ ನಿರ್ಧಾರ ತೆಗೆದುಕೊಳ್ತೇವೆ. ಮಠಾಧೀಶರು ಅವರ ಅಭಿಪ್ರಾಯ ಹೇಳ್ತಿದಾರೆ, ಬಿಜೆಪಿಗೆ ಓಟ್ ಹಾಕಿಲ್ಲ ಯಡಿಯೂರಪ್ಪನವರಿಗೆ ಅಂತ ಅವರು ತಿಳಿಸಿದ್ದಾರೆ. ಹೀಗಾಗಿ ನಾನು ಅವರ ನಡೆಯನ್ನು ತಪ್ಪು ಅಂತ ಹೇಳಲ್ಲ ಎಂದು ವ್ಯಂಗ್ಯವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಿನಲ್ಲಿ ಈ ರೀತಿಯಾದ ಹೇಳಿಕೆಯನ್ನ ನೀಡಿದ್ದಾರೆ. ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಲು ಗುರುವಾರ ಸಂಜೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಸ್ಪತ್ರೆಗೆ ಭೇಟಿ ನೀಡಿದರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.