ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಯೋಜನೆಗಾಗಿ ಪಾದಾಯಾತ್ರೆ ಮಾಡಲು ಹೊರಟಿರೋದು ತಿಳಿದ ವಿಷಯ. ಇದಕ್ಕಾಗಿ ಜನ ಬೆಂಬಲ, ಸೆಲೆಬ್ರಿಟಿ, ಹಲವು ಸಂಘಟನೆಗಳ ಬೆಂಬಲವನ್ನು ಪಡೆಯಲು ಮುಂದಾಗಿದ್ದಾರೆ. ಎರಡು ದಿನದ ಹಿಂದಷ್ಟೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಚಿತ್ರರಂಗದ ಬೆಂಬಲವನ್ನು ಸಹ ಕೋರಿದ್ದರು.
ಇದೀಗ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಝೀ ಸರಿಗಮಪ ವೇದಿಕೆಗೆ ಬಂದು ಅಲ್ಲಿಯೂ ಮೇಕೆದಾಟು ಯೋಜನೆಯ ಮಹತ್ವ, ಅನುಕೂಲ, ಪಾದಯಾತ್ರೆಯ ರೂಪುರೇಷೆ ಇತರೆ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಬೆಂಬಲಯಾಚಿಸಿದ್ದಾರೆ.
ಸರಿಗಮಪ ವೇದಿಕೆಗೆ ಭೇಟಿ ನೀಡಿದ್ದ ಕನಕಪುರ ಬಂಡೆ ಡಿಕೆಶಿ ಹಂಸಲೇಖ, ವಿಜಯ ಪ್ರಕಾಶ್, ಅರ್ಜುನ್ ಜನ್ಯ ಅವರುಗಳ ಮೂಲಕ ರಾಜ್ಯದ ಬೆಂಬಲವನ್ನು ಪಾದಯಾತ್ರೆಗಾಗಿ ಕೇಳಿದ್ದಾರೆ. ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಹಂಸಲೇಖ, ಪಾದಯಾತ್ರೆಗಾಗಿ ವಿಶೇಷವಾಗಿ ಎರಡು ಹಾಡುಗಳನ್ನು ರಚಿಸಿಕೊಡುವುದಾಗಿಯೂ ಹೇಳಿದ್ದಾರಂತೆ. ಹಂಸಲೇಖ ರಚಿಸಲಿರುವ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಹಾಡುಗಳು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.
ಇತ್ತೀಚೆಗಷ್ಟೆ ಸಾಹಿತಿ ಎಸ್.ಜಿ ಸಿದ್ದರಾಮಯ್ಯ ಅವರ ‘ಯರೆಬೇವು’ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೊಡನೆ ವೇದಿಕೆ ಹಂಚಿಕೊ0ಡಿದ್ದ ಹಂಸಲೇಖ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾರ್ಯಗಳನ್ನು ಮನಸಾರೆ ಹೊಗಳಿದ ಹಂಸಲೇಖ. ”ಈ ಧರ್ಮೋಕ್ರಸಿಯನ್ನು ಪಕ್ಕಕ್ಕೆ ಸರಿಸಿ, ಡೆಮೊಕ್ರಸಿಯನ್ನು ತಂದುಕೊಡಲಿ. ಹಾಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಡನ್ನು ಮತ್ತೆ ಹಾಲಾಗಿಸಲಿ” ಎಂದು ಪದಜೋಡಿಸಿದ್ದರು ಎಂಬುವುದು ವಿಶೇಷ.