ನವದೆಹಲಿ: ಕಡಿಮೆ ಅಂತರದಲ್ಲಿರುವ ಟ್ಯಾಂಕ್ಗಳನ್ನು ನಾಶಪಡಿಸುವ, ಸೈನಿಕರು ಹೊತ್ತೊಯ್ಯಬಲ್ಲ ಕ್ಷಿಪಣಿ ಉಡಾವಣಾ ಉಪಕರಣಗಳಿಂದ ಹಾರಿಬಿಡಬಹುದಾದ ಗೈಡೆಡ್ ಕ್ಷಿಪಣಿಯನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬುಧವಾರ ಯಶಸ್ವಿಯಾಗಿ ಪ್ರಯೋಗಿಸಿತು. ಇಂಥದ್ದೊಂದು ಸುಧಾರಿತ ಹಾಗೂ ಹಗುರ ಟ್ಯಾಂಕ್ ನಾಶಕ ಕ್ಷಿಪಣಿ ಬೇಕೆಂದು ಭಾರತೀಯ ಸೇನೆಯು ಹಲವು ವರ್ಷಗಳಿಂದ ಬೇಡಿಕೆಯಿಟ್ಟಿತ್ತು.
ಟ್ಯಾಂಕ್ ಒಂದರ ಪ್ರತಿಕೃತಿಯನ್ನು ಕನಿಷ್ಠ ರೇಂಜ್ನಲ್ಲಿ ಇರಿಸಿಕೊಂಡು ಸೈನಿಕರು ಹೊತ್ತೊಯ್ಯಬಲ್ಲ ಸಂಚಾರಿ ಲಾಂಚರ್ ಮೂಲಕ ಈ ಕ್ಷಿಪಣಿಯನ್ನು ಉಡಾಯಿಸಲಾಯಿತು. ನೇರ ದಾಳಿಯ ರೀತಿಯಲ್ಲಿಯೇ ಟ್ಯಾಂಕ್ಗೆ ಕ್ಷಿಪಣಿ ಅಪ್ಪಳಿಸಿತು. ಕ್ಷಿಪಣಿಯ ಹೊಡೆತಕ್ಕೆ ಟ್ಯಾಂಕ್ ಛಿತ್ರವಾಯಿತು. ಕ್ಷಿಪಣಿಯನ್ನು ರೂಪಿಸಿದ್ದ ಉದ್ದೇಶಗಳು ಸಂಪೂರ್ಣವಾಗಿ ಈಡೇರಿವೆ. ಗರಿಷ್ಠ ರೇಂಜ್ ಪರೀಕ್ಷೆಗಳಲ್ಲಿ ಕ್ಷಿಪಣಿಯ ಪ್ರಯೋಗ ಈಗಾಗಲೇ ಯಶಸ್ವಿಯಾಗಿದೆ ಎಂದು ಡಿಆರ್ಡಿಒ ಹೇಳಿದೆ.
ಅತಿಸೂಕ್ಷ್ಮ ಇನ್ಫ್ರಾರೆಡ್ ಇಮೇಜಿಂಗ್ ಸೀಕರ್ ತಂತ್ರಜ್ಞಾನ ಅಳವಡಿಸಿರುವ ಈ ಕ್ಷಿಪಣಿಯು ಅತ್ಯಾಧುನಿಕ ಏವಿಯಾನಿಕ್ಸ್ನೊಂದಿಗೆ (ವೈಮಾನಿಕ ವಿನ್ಯಾಸ) ಸಜ್ಜಾಗಿದೆ. ಈ ಯಶಸ್ವಿ ಪರೀಕ್ಷೆಯ ನಂತರ ಭಾರತವು ದೇಶೀ ನಿರ್ಮಿತ 3ನೇ ತಲೆಮಾರಿನ, ಸೈನಿಕನೊಬ್ಬ ಹೊತ್ತೊಯ್ಯಬಲ್ಲಷ್ಟು ಹಗುರವಾದ ಗುರಿ ನಿರ್ದೇಶಿತ ಟ್ಯಾಂಕ್ ನಿರೋಧ ಕ್ಷಿಪಣಿ ರೂಪಿಸಿದ ವಿಶ್ವದ ಕೆಲವೇ ದೇಶಗಳಲ್ಲಿ ಒಂದು ಎನಿಸಿಕೊಂಡಿದೆ.
ಈ ಸಾಧನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ಡಿಒ ವಿಜ್ಞಾನಿಗಳು ಮತ್ತು ರಕ್ಷಣಾ ಉದ್ದಿಮೆಗಳನ್ನು ಅಭಿನಂದಿಸಿದ್ದಾರೆ.