ಕೊರೋನಾ ಕಾರ್ಮೋಡದ ನಡುವೆ ದೀಪಗಳ ಹಬ್ಬ ದೀಪಾವಳಿ ನಡೆಯಲಿದೆ. ಪರಿಸರ ಸ್ನೇಹಿ ಹಬ್ಬ ಆಚರಿಸುವುದಕ್ಕೆ ಸರ್ಕಾರ ಕರೆ ನೀಡಿದೆ.
ಇದೇ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ ಗೋವಿನ ಸೆಗಣಿಯ ದೀಪಗಳಿಂದ ದೀಪಾವಳಿ ಆಚರಿಸಲು ಸಿದ್ಧತೆ ನಡೆದಿದೆ. ಕೊರೋನಾ ಮಹಾಮಾರಿ ಇನ್ನೂ ದೇಶ ಬಿಟ್ಟು ತೊಲಗಿಲ್ಲ. ಇದೇ ಕೊರೋನಾ ಒಂದಷ್ಟು ಇಳಿಮುಖವಾಗಿದ್ದರೂ ಅದರ ಭೀತಿಯಿಂದ ಜನ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಹೀಗಾಗಿಯೇ ಕೊರೋನಾ ಸೋಂಕಿತರಿಗೆ ತೊಂದರಯಾಗಬಹುದಂದು ಸರ್ಕಾರ ಪಟಾಕಿಗಳ ಮೇಲೆ ನಿರ್ಬಂಧ ಹೇರಿ, ಪರಿಸರ ಸ್ನೇಹಿ ಪಟಾಕಿ ಬಿಡುವಂತೆ ಮನವಿ ಮಾಡಿದೆ. ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಕರೆ ನೀಡಿದೆ.
ಇದೇ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳು ಕಲಬುರ್ಗಿಯಲ್ಲಿ ಗೋಮಯ ದೀಪಾವಳಿ ಆಚರಿಸಲು ಮುಂದಾಗಿವೆ. ಗೋವಿನ ಸೆಗಣಿಯಿಂದ ಮಾಡಿದ ಪ್ರಣತಿಯೊಂದಿಗೆ ದೀಪಾವಳಿ ಆಚರಿಸುವುದೇ ಗೋಮಯ ದೀಪಾವಳಿಯಾಗಿದೆ. ಇದಕ್ಕಾಗಿ ಕಲಬುರ್ಗಿಯಲ್ಲಿ ಸಾವಿರಾರು ಗೋವಿನ ಪ್ರಣತಿಗಳು ಸಿದ್ಧಗೊಂಡಿವೆ.ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತದ ಕಲ್ಪಿನೆಗೆ ಅನುಗುಣವಾಗಿ ಗೋವಿನ ಸೆಗಣಿಯಿಂದ ದೀಪಗಳನ್ನು ಸಿದ್ಧಪಡಿಸಲಾಗಿದೆ. ಗೋವಿನ ಸೆಗಣಿ, ಗೋವಿನ ಮೂತ್ರ, ಅನ್ನದ ಗಂಜಿ ಹಾಗೂ ಕಟ್ಟಿಗೆ ಪುಡಿಗಳ ಮಿಶ್ರಣದೊಂದಿಗೆ ಗೋವಿನ ಪ್ರಣತಿ ಸಿದ್ಧಪಡಿಸಲಾಗಿದೆ.
ಕಲಬುರ್ಗಿಯ ನಂದಿ ಅನಿಮಲ್ ವೆಲ್ಫೇರ್ ಸೊಸೈಟಿಯ ಗೋಶಾಲೆಯಲ್ಲಿ ಗೋಮಯ ಪ್ರಣತಿಗಳನ್ನು ಸಿದ್ಧಪಡಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಚೀನಾದ ದೀಪಗಳನ್ನು ಕೈಬಿಟ್ಟು ಗೋವಿನ ಪ್ರಣತಿಗಳಲ್ಲಿ ದೀಪಾವಳಿ ಆಚರಿಸುವ ಮೂಲಕ ಪರಿಸರ ಸ್ನೇಹಿ ಹಬ್ಬ ಆಚರಿಸುವಂತೆ ನಂದಿ ಅನಿಮಲ್ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಕೇಶವ ಮೋಟಗಿ ಕರೆ ನೀಡಿದ್ದಾರೆ.
ನಂದಿ ಅನಿಮಲ್ ವೆಲ್ ಫೇರ್ ಸೊಸೈಟಿಗೆ ಸೈಯದ್ ಚಿಂಚೋಳಿಯ ಪಯೋನಿಧಿ ಗೋಶಾಲೆ, ಕುಸನೂರು ಮಾಧವ ಗೋಶಾಲೆಗಳು ಬೆಂಬಲವಾಗಿ ನಿಂತಿವೆ. ಜೊತೆಗೆ ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್. ಮತ್ತಿತರ ಹಿಂದೂಪರ ಸಂಘಟನೆಗಳು ಸಹಕಾರ ನೀಡಿದ್ದು, ಈ ವರ್ಷ 10 ಸಾವಿರ ಗೋವಿನ ಪ್ರಣತಿ ಸಿದ್ಧಪಡಿಸಲಾಗಿದೆ. 15 ರೂಪಾಯಿಗೆ ಜೋಡಿ ಪ್ರಣತಿಗಳನ್ನು ಮಾರಾಟ ಮಾಡಲಾಗುತ್ತಿದೆ.