ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದ್ದ ಮನೆಯ ಕಳ್ಳತನವನ್ನು ಭೇದಿಸಿದ ಪೊಲೀಸರು, ಕಳುವಾಗಿರುವ ಚಿನ್ನಾಭರಣ ಮತ್ತು ಬೈಕ್ ಗಳ ಸಮೇತ ಕಳ್ಳರನ್ನು ಬಂಧಿಸಿದ್ದಾರೆ.ಕಳೆದ ಮಾರ್ಚ್ ನಲ್ಲಿ ಗುಂಡ್ಲುಪೇಟೆ ನಿವಾಸಿ ಮಹದೇವಪ್ಪ ಅವರ ಮನೆಯಲ್ಲಿ ನಡೆದಿದ್ದ ಕಳ್ಳತನದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಮನೆಯ ಬೀರುವಿನಲ್ಲಿದ್ದ 10 ಗ್ರಾಂ ಚಿನ್ನದ ಚೈನ್, 5.900 ಗ್ರಾಂ ಚಿನ್ನದ ಓಲೆ ಜುಮುಕಿ, 3.100 ಗ್ರಾಂ ನ ಒಂದು ಜೊತೆ ಹರಳಿನ ಓಲೆ, 1.600 ಗ್ರಾಂ ಚಿನ್ನದ ಉಂಗುರ ಹಾಗೂ 52 ಸಾವಿರ ರೂಪಾಯಿ ನಗದು ಕಳುವಾಗಿತ್ತು ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು, ಮಾಡ್ರಹಳ್ಳಿ ಗ್ರಾಮದ ಶಿವಸ್ವಾಮಿ @ ಪುನೀತ್, ಚಂದ್ರು, ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಮಹದೇವಪ್ಪರವರ ಮನೆಯಲ್ಲಿ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡು, ಕಳ್ಳತನ ಮಾಡಿದ್ದ ಚಿನ್ನಾಭರಣ , ಎರಡು ಬೈಕ್ಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.




ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಜಯಕುಮಾರ್, ಸಬ್ ಇನ್ಸ್ಪೆಕ್ಟರ್ ನರೇಶ್ ಕುಮಾರ್, ಮುಖ್ಯಪೇದೆ ಕಿಶೋರ್, ಶಿವರಾಮು, ಬಂಟಪ್ಪ, ಮಹೇಶ್ ಅವರುಗಳು ಭಾಗಿಯಾಗಿದ್ದರು.








