ತಂದೆಯೇ ಹೆತ್ತ ಮಕ್ಕಳ ಕತ್ತು ಸೀಳಿ ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಶ್ರೀರಂಗಪಟ್ಟಣ ಗ್ರಾ.ಠಾಣಾ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದ ಹೊರವಲಯದಲ್ಲಿರುವ ಚಾಮುಂಡೇಶ್ವರಿ ಫಾರ್ಮ್ ಹೌಸ್ನಲ್ಲಿ ಆರೋಪಿ ಶ್ರೀಕಾಂತ್ ತನ್ನ ಕೈಯಿಂದಲೇ ಕುಟುಂಬದ ಸರ್ವನಾಶ ಮಾಡಿದ್ದಾನೆ.
ಆರೋಪಿ ಶ್ರೀಕಾಂತ್ ತನ್ನ ಪತ್ನಿ ಲಕ್ಷ್ಮೀ ಮೇಲೆ ಹಲ್ಲೆ ನಡೆಸಿ ಇಬ್ಬರು ಪುಟ್ಟ ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ಬುಧವಾರ ಮಧ್ಯ ರಾತ್ರಿಯೇ ಇಬ್ಬರು ಮಕ್ಕಳನ್ನು ಕೊಂದು ತನ್ನ ಹುಟ್ಟೂರಾದ ಜೇವರ್ಗಿಗೆ ತೆರಳಿದ್ದನು. ಮನೆಗೆ ಹೋಗಿ ಒಂಚೂರು ಪಶ್ಚಾತಾಪ ಪಡದೆ ಕಂಠ ಪೂರ್ತಿ ಮದ್ಯ ಸೇವಿಸಿ ಮಲಗಿದ್ದನು. ಟಿವಿಯಲ್ಲಿ ಮಕ್ಕಳ ಕೊಲೆ ವಿಚಾರ ತಿಳಿದು ಸ್ವತಃ ಶ್ರೀಕಾಂತ್ ಪೋಷಕರೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಶ್ರೀಕಾಂತ್ನನ್ನು ಬಂಧಿಸಿದ್ದಾರೆ.
ಬಂಧನದ ಬಳಿಕ ಕೊಲೆಗೆ ಕಾರಣವೇನು ಎಂಬುದನ್ನ ಶ್ರೀಕಾಂತ್ ರಿವೀಲ್ ಮಾಡಿದ್ದಾನೆ. ಹೆಂಡತಿ ಯಾವಾಗಲು ಮೊಬೈಲ್ನಲ್ಲಿ ಮಾತನಾಡುತ್ತಿದ್ದಳು. ಯಾರೊಂದಿಗೂ ಗಂಟೆ ಗಟ್ಟಲೇ ಮಾತನಾಡುತ್ತಲೇ ಇದ್ದಳು. ಈ ಹಿನ್ನಲೆ ಪತ್ನಿಯ ಮೇಲೆ ಶಂಕೆ ವ್ಯಕ್ತಪಡಿಸಿ ಶ್ರೀಕಾಂತ್ ಕಿರಿಕ್ ಮಾಡ್ತಿದ್ದ. ಪತ್ನಿ ಲಕ್ಷ್ಮೀಯ ಶೀಲವನ್ನು ಶಂಕಿಸಿ ಪದೆ ಪದೇ ಗಲಾಟೆ ನಡೆಯುತ್ತಿತ್ತು. ಆರೋಪಿ ಶ್ರೀಕಾಂತ್ ಇಬ್ಬರು ಮಕ್ಕಳು ನನ್ನದಲ್ಲವೆಂದು ಮಕ್ಕಳ ಮೇಲೆ ಸದಾ ಕೆಂಡ ಕಾರುತ್ತಿದ್ದನಂತೆ. ಬುಧವಾರ ರಾತ್ರಿ ಮಕ್ಕಳ ಕತ್ತನ್ನ ಸೀಳಿ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದು ಹಾಕಿದ್ದು ಪತ್ನಿಯನ್ನ ಕೊಲ್ಲಲು ಬರೋಬ್ಬರಿ 6 ಬಾರಿ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾಗಿ ಪೊಲೀಸರ ಬಳಿ ಕಾರಣ ಬಾಯ್ಬಿಟ್ಟಿದ್ದಾನೆ.
ಆದರ್ಶ (4) ಮತ್ತು ಅಮೂಲ್ಯ (2) ತಂದೆಯಿಂದಲೇ ಕೊಲೆಯಾದ ದುರ್ದೈವಿ ಮಕ್ಕಳು. ಗುಲ್ಬರ್ಗ ಮೂಲದ ಶ್ರೀಕಾಂತ್ (29) ಮಕ್ಕಳನ್ನು ಕೊಂದು ಪತ್ನಿ ಕೊಲೆಗೂ ಯತ್ನಿಸಿರುವ ಪಾಪಿಯಾಗಿದ್ದಾನೆ. ಕೌಟುಂಬಿಕ ಕಲಹದಿಂದ ಮೊದಲು ಪತ್ನಿ ಲಕ್ಷ್ಮಿಗೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ. ಸುತ್ತಿಗೆ ಏಟು ಬಿದ್ದ ತಕ್ಷಣ ಲಕ್ಷ್ಮೀ ಮೂರ್ಛೆ ಹೋಗಿ ಕೆಳಗೆ ಬಿದ್ದಿದ್ದಾಳೆ. ಬಳಿಕ ಮಕ್ಕಳಿಗೆ ಅದೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಮಕ್ಕಳು ಸ್ಥಳದಲ್ಲಿಯೇ ರಕ್ತಕಾರಿ ಸಾವನ್ನಪ್ಪಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.