ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ತಿ.ನರಸೀಪುರ ತಾಲೂಕಿನ ಹನುಮನಹಾಳು ಗ್ರಾಮದಲ್ಲಿ ನಡೆದಿದೆ. ಮನುರಾಣಿ (24) ಮೃತ ದುರ್ದೈವಿ.
ಪತಿ ಮಂಜು ಅದೇ ಗ್ರಾಮದ ವಿವಾಹಿತ ಮಹಿಳೆ ಜತೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕದ್ದು ಮುಚ್ಚಿ ನಡೆಯುತ್ತಿದ್ದ ಇವರ ಸಂಬಂಧ ಮನುರಾಣಿಗೆ ತಿಳಿದಿತ್ತು. ಬಳಿಕ ಈ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ನಡುವೆ ಗಲಾಟೆ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಅನಂತರ ಗ್ರಾಮದಲ್ಲಿ ರಾಜಿ ಪಂಚಾಯ್ತಿಯನ್ನು ಮಾಡಲಾಗಿತ್ತು. ಆದರೂ ಮಂಜು ತನ್ನ ಚಾಳಿಯನ್ನು ಮುಂದುವರಿಸಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಪ್ರಶ್ನೆ ಮಾಡಿದ ನಂತರ ಮಂಜ ವರದಕ್ಷಿಣೆಗಾಗಿ ಬೇಡಿಕೆ ಇಡಲಾರಂಭಿಸಿದ್ದ ಎನ್ನಲಾಗಿದೆ. ಈತನ ನಿರಂತರ ಕಾಟಕ್ಕೆ ಬೇಸತ್ತ ಮನುರಾಣಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮನುರಾಣಿ ಹಾಗೂ ಮಂಜ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ತಾಯಿಯನ್ನು ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಇತ್ತ ಮನುರಾಣಿ ಪೋಷಕರು ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಹೊಂದಿಲ್ಲ. ಆಕೆಯ ಗಂಡನೇ ವಿಷ ಕುಡಿಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.