ಬೆಂಗಳೂರು(ಅ.22): ದರೋಡೆಕೋರರ ತಂಡವೊಂದು ಸಿನಿಮೀಯ ರೀತಿಯಲ್ಲಿ ಟ್ರಕ್ ಅಡ್ಡಗಟ್ಟಿ ದರೋಡೆ ನಡೆಸಿದ ಘಟನೆ ವರದಿಯಾಗಿದೆ.ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು ತಮಿಳುನಾಡಿನ ಪೆರಂಬುದೂರಿನಿಂದ ಮುಂಬೈ ತೆರಳುತ್ತಿದ್ದ ಟ್ರಕ್ ನಿಂದ ದರೋಡೆಕೋರರು 15 ಕೋಟಿಯ ಮೊಬೈಲ್ ಫೋನ್’ಗಳನ್ನು ಎಗರಿಸಿದ್ದಾರೆ.
ಮೊಬೈಲ್ ಪೋನ್ಗಳು ಎಮ್.ಐ ಸಂಸ್ಥೆಗೆ ಸೇರಿದ್ದಾಗಿದೆ. ಇದು ತಮಿಳುನಾಡಿನ ಪೆರಂಬುದೂರಿನ ತಯಾರಿಕ ಘಟಕದಿಂದ ಮುಂಬೈಗೆ ಸಾಗಿಸಲಾಗುತ್ತಿತ್ತು.ಹೊಸೂರು ಕಾಡು ಪ್ರದೇಶದಲ್ಲಿ ಬುಧವಾರ ರಾತ್ರಿ 2 ರ ಹೊತ್ತಿಗೆ ಟ್ರಕ್ಕ್ ಅಡ್ಡ ಹಾಕಿದ ದರೋಡೆಕೋರರ ತಂಡ ಚಾಲಕ ಅರುಣ್ ಮತ್ತು ಸಹಾಯಕ ಕುಮಾರ್ ನನ್ನು ಕಟ್ಟಿ ಹಾಕಿದೆ. ನಂತರ ಟ್ರಕ್ಕನ್ನು ಸ್ವಲ್ಪ ದೂರ ಚಾಲಯಿಸಿಕೊಂಡು ಹೋಗಿ ‘ಕೆಲಸ ಪ್ರಗತಿಯಲ್ಲಿದೆ’ ಬೋರ್ಡ್ ಇಟ್ಟು ಇನ್ನೊಂದು ಲಾರಿಗೆ ಸುಮಾರು 14500 ಮೊಬೈಲ್ ಗಳನ್ನು ತುಂಬಿಸಿಕೊಂಡು ಪರಾರಿಯಾಗಿದ್ದಾರೆ.
ಆ ಭಾಗದಲ್ಲಿ ಹಾದು ಹೋಗುತ್ತಿದ್ದ ವ್ಯಕ್ತಿ ಖಾಲಿ ಬಿದ್ದ ಲಾರಿ ನೋಡಿ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾನೆ. ಆದರೆ ದರೋಡೆಕೋರರು ಪರಾರಿಯಾಗಿದ್ದರು. ದರೋಡೆಕೋರರು ತೊರೆದ ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಈಗ ದರೋಡೆಕೋರರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.