ಸಾಲ ಬಾಧೆಯಿಂದ ಕಂಗೆಟ್ಟು ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸದಾಶಿವ ನಗದರಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಸದಾಶಿವನಗರ ನಿವಾಸಿ ಗರೀಬ್ ಸಾಬ್ (32) , ಪತ್ನಿ ಸುಮಯ್ಯ (30) , ಪುತ್ರಿ ಹಾಜಿರಾ(14) , ಪುತ್ರರಾದ ಮೊಹ್ಮದ್ ಸುಭಾನ್(10), ಮೊಹಮದ್ ಮುನೀರ್ (8) ಎಂದು ಗುರುತಿಸಲಾಗಿದೆ.
ಡೆತ್ ನೋಟ್ ಬರೆದಿಟ್ಟು, ಮೂವರು ಮಕ್ಕಳಿಗೆ ವಿಷ ಕುಡಿಸಿ ದಂಪತಿ ನೇಣಿಗೆ ಶರಣಾಗಿದ್ದಾರೆ. ಸ್ಥಳಕ್ಕೆ ಎಸ್ ಪಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಬಾಬ್ ವ್ಯಾಪಾರದಲ್ಲಿ ಆದಾಯವಿಲ್ಲ, ಇದರಿಂದ ಜೀವನ ನಡೆಸಲು ಕಷ್ಟವಾಗಿದೆ. ಹೀಗಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಡೆತ್ನೋಟ್ನಲ್ಲಿ ಬರೆದಿರುವುದು ಕಂಡುಬಂದಿದೆ. ಸದಾಶಿವ ನಗರದ 3ನೇ ಬಿ ಮಖ್ಯರಸ್ತೆಯಲ್ಲಿರುವ ನಮ್ಮ ಮನೆಯ ಕೆಳಗಡೆಯ ಮನೆಯವರು ನಮಗೆ ಬಹಳ ಕಷ್ಟ ಕೊಟ್ಟಿದ್ದಾರೆ ಅವರ ವಿರುದ್ಧ ಗೃಹಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಗರೀಬ್ ಸಾಬ್ ಮನವಿ ಮಾಡಿದ್ದಾರೆ.
ಬಡತನದಲ್ಲಿ ಹೇಗೋ ಜೀವನ ಮಾಡಿಕೊಂಡಿದ್ದೆವು, ನಾವು ಬಾಡಿಗೆ ಮನೆಯಲ್ಲಿದ್ದೆವು, ಖಲಂದರ್ ಬಾಡಿಗೆಯಲ್ಲಿದ್ದ ನಾವು ಸಂಘದಲ್ಲಿ ಎರಡು ಸಾವಿರ ಕಮಿಷನ್ ಕೊಟ್ಟು ಸಾಲ ತೆಗೆದುಕೊಳ್ಳುತ್ತಿದ್ದೆವು. ಇವನ ಮಾತು ಕೇಳದೆ ಇದ್ದರೆ ಪೂರ್ತಿ ಸಾಲ ಕಟ್ಟು ಅಂತ ಹಿಂಸೆ ಕೊಡುತ್ತಿದ್ದ. ಸಾಲ ಕೊಟ್ಟವರಿಗೆ ಇಲ್ಲಸಲ್ಲದ್ದು ಹೇಳಿ ಗಲಾಟೆ ಮಾಡೋ ಹಾಗೆ ಮಾಡಿದ್ದ. ಇದೇ ರೀತಿ ಅವನ ದೊಡ್ಡ ಮಗ, ಮಗಳು, ಮಹಡಿ ಮನೆಯ ಶಬಾನಾ, ಅವಳ ಮಗಳು ಎಲ್ಲರೂ ತೊಂದರೆ ಕೊಟ್ಟಿದ್ದಾರೆ. ನಾವು ಸಾಯೋಕೆ ಈ 5 ಜನರೇ ಕಾರಣ ಎಂದು ಡೆತ್ನೋಟ್ನಲ್ಲಿ ಮೃತ ಗರೀಬ್ ಸಾಬ್ ಬರೆದಿದ್ದಾರೆ. ಪೊಲೀಸರು ಈ ಐವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡೆತ್ನೋಟ್ನಲ್ಲಿ ಉಲ್ಲೇಖವಾಗಿದೆ.