ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ. ಕೌಶಲಾಭಿವೃದ್ಧಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ ವಹಿಸಿದ ಆರೋಪವಿದೆ.
ನಂದ್ಯಾಲ್ ಡಿಐಜಿ ರಘುರಾಮಿ ರೆಡ್ಡಿ ಮತ್ತು ಅಪರಾಧ ತನಿಖಾ ದಳ (CID) ನೇತೃತ್ವದ ಪೊಲೀಸರ ಆರ್ಕೆ ಫಂಕ್ಷನ್ ಹಾಲ್ನಲ್ಲಿರುವ ನಾಯ್ಡು ಅವರ ನಿವಾಸಕ್ಕೆ ಮುಂಜಾನೆ 3 ಗಂಟೆಗೆ ಆಗಮಿಸಿದ್ದಾರೆ. ಈ ಸಮಯದಲ್ಲಿ ಚಂದ್ರಬಾಬು ನಾಯ್ದು ವಿಶ್ರಾಂತಿ ಪಡೆಯುತ್ತಿದ್ದರು. ಪೊಲೀಸರು ವಶಕ್ಕೆ ಪಡೆಯಲು ಬಂದ ವಿಚಾರ ತಿಳಿದು ಭಾರೀ ಸಂಖ್ಯೆಯಲ್ಲಿ ನಾಯ್ಡು ಮನೆ ಬಳಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳ ಪ್ರತಿಭಟನೆಯಿಂದ ಪೊಲೀಸರಿಗೆ ನಾಯ್ದು ಅವರನ್ನು ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ನಾಯ್ಡು ಅವರ ರಕ್ಷಣೆಗೆ ನಿಯೋಜನೆಗೊಂಡಿದ್ದ ಎಸ್ಪಿಜಿ ಪಡೆಗಳು ಸಹ ಪೊಲೀಸರಿಗೆ ಅನುಮತಿ ನೀಡಿರಲಿಲ್ಲ. ಕೊನೆಗೆ 6 ಗಂಟೆಗೆ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ಬಂಧಿಸಿದರು.
ಐಪಿಸಿ ಸೆಕ್ಷನ್ 120 (8), 166, 167, 418, 420, 465, 468, 471, 409 ರ ಅಡಿಯಲ್ಲಿ ಬಂಧಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.