Wednesday, July 22, 2026
spot_imgspot_img
spot_imgspot_img

ಕಂಬಳಬೆಟ್ಟು: ನೂಜಿ – ಅಮೈ ಸಂಪರ್ಕ ಸೇತುವೆಗೆ ಶಿಲಾನ್ಯಾಸ

- Advertisement -
- Advertisement -

50ವರ್ಷದ ಬೇಡಿಕೆಯನ್ನು ಈಡೇರಿಸಿ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ:ಶಾಸಕ ಅಶೋಕ್ ರೈ

ಪುತ್ತೂರು: ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ನೂಜಿ ಎಂಬಲ್ಲಿ ಹೊಸ ಸೇತುವೆಗೆ 2 ಕೋಟಿ ರೂ. ಅನುದಾನ ಮಂಜೂರಾಗಿದೆ, ಇದು ಈ ಭಾಗದ ಜನರ ಸುಮಾರು 50 ವರ್ಷದ ಹಿಂದಿನ ಬೇಡಿಕೆಯಾಗಿತ್ತು. ಕಳೆದ ಚುನಾವಣಾ ಸಮಯದಲ್ಲಿ ಹೊಸ ಸೇತುವೆ ನಿರ್ಮಾಣದ ಬೇಡಿಕೆ ಇಟ್ಟಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಕಂಬಳಬೆಟ್ಟು ನೂಜಿ ಎಂಬಲ್ಲಿ ನೂತನ ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು ಇಲ್ಲಿನ ದೊಡ್ಡ ಹೊಳೆಯನ್ನು ದಾಟಿಯೇ ಜನಸಾಗಬೇಕಿತ್ತು. ಕಿಂಡಿ ಅಣೆಕಟ್ಟಿನ ಮೇಲೆ ಅಡಿಕೆ ಮರದ ಪಾಲವನ್ನು ಇಟ್ಟು ಅದರಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇತ್ತು. ಕಳೆದ ವಿಧಾನಸಭಾ ಚುನಾವಣೆಯ ವೇಳೆ ವೋಟು ಕೇಳಲು ಹೋದ ಮೇಲೆ ಇಲ್ಲಿನ ಜನ ನನ್ನಲ್ಲಿ ಮನವಿ ಮಾಡಿ ಇಷ್ಟು ವರ್ಷದಿಂದ ನಮಗೆ ಯಾರೂ ಸೇತುವೆ ಮಾಡಿಕೊಟ್ಟಿಲ್ಲ ಎಂದು ನೋವನ್ನು ಹೇಳಿಕೊಂಡಿದ್ದರು. ಗ್ರಾಮಸ್ಥರ ಬೇಡಿಕೆಗೆ ತಕ್ಕಂತೆ ಇಲ್ಲಿ 2 ಕೋಟಿ ರೂ ಅನುದಾನದಲ್ಲಿ ಹೊಸ ಸೇತುವೆ ನಿರ್ಮಾಣವಾಗಲಿದೆ ಎಂದು ಶಾಸಕರು ಹೇಳಿದರು.

ಮಳೆಗಾಲದಲ್ಲಿ ಇಲ್ಲಿನ ಹೊಳೆ ತುಂಬಿ ಹರಿದರೆ ಜನ ಮಧ್ಯೆ ಸಿಲುಕಿಕೊಳ್ಳುವಂತಾಗಿತ್ತು. ಶಾಲಾ ಮಕ್ಕಳು, ವೃದ್ಧರು ತುಂಬ ಹರಿಯುವ ಹೊಳೆಯಲ್ಲಿ ಅಡಿಕೆ ಮರದ ಪಾಲದ ಸೇತುವೆಯನ್ನೇ ಆಶ್ರಯಿಸಬೇಕಿತ್ತು. ಈ ಹಿಂದೆ ಹಲವು ಬಾರಿ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಿಂದ ಬೇಡಿಕೆಯನ್ನು ಪರಿಗಣಿಸಿರಲಿಲ್ಲ ಎಂದು ಆರೋಪಿಸುವ ಗ್ರಾಮಸ್ಥರು ಶಾಸಕರಿಗೆ ಸಭೆಯಲ್ಲಿ ಜೈಕಾರ ಕೂಗಿದರು.

ಮುಂದಿನ 6 ತಿಂಗಳಲ್ಲಿ ಸೇತುವೆ ಕಾಮಗಾರಿ ಪೂರ್ಣವಾಗಲಿದೆ ಎಂದು ತಿಳಿಸಿದ ಶಾಸಕರು ಅಭಿವೃದ್ಧಿ ಮಾಡಿದವರನ್ನು ಜನತೆ ಮರೆಯಬಾರದು. ಜನರ ಮೆಮೊರಿ ಶಕ್ತಿ ಈಗಿನ ಕಾಲದಲ್ಲಿ ಕುಂದುತ್ತಿದೆ. ಅಭಿವೃದ್ಧಿ ಯಾರು ಮಾಡುತ್ತಾರೋ ಅವರ ಜೊತೆ ಜನತೆ ನಿಲ್ಲುವ ಶಪಥವನ್ನು ಕೂಡಾ ಮಾಡಬೇಕಿದೆ. ನೂಜಿಯಲ್ಲಿ ಯಾಕೆ ಇಷ್ಟು ವರ್ಷ ಸೇತುವೆ ನಿರ್ಮಾಣ ಮಾಡಿಲ್ಲ ಎಂದು ನನಗೆ ಗೊತ್ತಿಲ್ಲ. ಇಲ್ಲಿ ಅಗತ್ಯವಾಗಿಯೂ ಆಗಬೇಕಾದ ಕೆಲಸ ಇದಾಗಿತ್ತು. ಅಭಿವೃದ್ಧಿಯಲ್ಲಿ ಎಂದೂ ರಾಜಕೀಯ ಮಾಡಬಾರದು. ರಾಜಕೀಯ ಮಾಡಿದ್ರೆ ಜನರಿಗೆ ತೊಂದರೆಯಾಗುತ್ತದೆ ಎಂಬುದನ್ನು ಪ್ರತಿಯೊಬ್ಬ ಜನಪ್ರತಿನಿಧಿ ತಿಳಿದುಕೊಂಡಿರಬೇಕು ಎಂದು ಶಾಸಕರು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್ ಮಾತನಾಡಿ ನೂಜಿಯ ಹಳೆಯ ಕಾಲದ ಬೇಡಿಕೆ ಈಡೇರಿದೆ, ಅಶೋಕ್ ರೈ ಎರಡು ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ಇಲ್ಲಿನ ಜನರು ಹೇಳಿದಾಗ ನಾನು ಮೊದಲಿಗೆ ನಂಬಿರಲಿಲ್ಲ. ತಾನು ಜಿ.ಪಂ ಉಪಾಧ್ಯಕ್ಷರಾಗಿದ್ದ ವೇಳೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನಪಟ್ಟಿದ್ದೆ ಆದರೆ ಅಷ್ಟೊಂದು ಅನುದಾನವಿಲ್ಲದ ಕಾರಣ ಅದು ನೆನೆಗುದಿಗೆ ಬಿತ್ತು. ಅಡಿಕೆ ಮರದ ಪಾಲವನ್ನು ದಾಟಿ ದಡ ಸೇರುತ್ತಿದ್ದ ಇಲ್ಲಿನ ನಿವಾಸಿಗಳಿಗೆ ಆಧುನಿಕ ಶೈಲಿಯ ಸೇತುವೆಯನ್ನು ಮಂಜೂರು ಮಾಡಿಸಿದ ಶಾಸಕರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಹೇಳಿದರು.

ವಿಟ್ಲ ಮುಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸುಶಾಂತ್ ಶೆಟ್ಟಿ ಮಾತನಾಡಿ ನೂಜಿಯ ಬಹುಕಾಲದ ಬೇಡಿಕೆ ಈಡೇರಿದೆ. ಇನ್ನು ಮಳೆಗಾಲದಲ್ಲಿ ಆತಂಕವಿಲ್ಲದೆ ಜನ ದಡ ಸೇರಬಹುದು. ಇಷ್ಟು ವರ್ಷದಲ್ಲಿ ಯಾವ ಜನಪ್ರತಿನಿಧಿಯೂ ಮಾಡದ ಕೆಲಸವನ್ನು ಶಾಸಕ ಅಶೋಕ್ ರೈ ಮಾಡಿದ್ದಾರೆ. ಜನತೆಯ ಬೇಡಿಕೆಗೆ ಮಾನವೀಯತೆಯ ಸ್ಪಂದನೆ ನೀಡಿದ್ದಾರೆ. ಈ ಭಾಗದ ಜನರು ಮುಂದೆ ಅಶೋಕ್ ಕೈ ಜೊತೆ ನಿಲ್ಲಲಿದ್ದಾರೆ ಎಂದು ಹೇಳಿದರು.

ವಿಟ್ಲ ಬ್ಲಾಕ್‌ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರೈ ಮಠಂತಬೆಟ್ಟು, ಹಿಂದುಳಿದ ವರ್ಗ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ವಿಟ್ಲ ಬ್ಲಾಕ್ ಮುಖಂಡರಾದ ರಮನಾಥ ವಿಟ್ಲ, ವಿಟ್ಲ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸಿರ್ ಕೋಲ್ಪೆ, ವಿಟ್ಲ ಮುಡ್ನೂರು ಗ್ರಾ.ಪಂ.ಸದಸ್ಯರಾದ ಎಲ್ಯಣ್ಣ, ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಬೂತ್ ಅಧ್ಯಕ್ಷ ಅಬ್ದುಲ್ ರಝಾಕ್, ಸ್ಥಳೀಯರಾದ ನಾರಾಯಣ ಅಮೈ, ಶೀನಪ್ಪ ಅಮೈ, ಹುದಾಖಾನಂ ಶಮೀರ್ ನೂಜಿ, ಅಬ್ದುಲ್ ಗಫೂರ್, ಸಲ್ಮಾನ್ ನೂಜಿ, ರಫೀಕ್ ನೂಜಿ, ಶಬೀರ್, ಕರೀಂ ನೂಜಿ, ಇಬ್ರಾಹಿಂ ಶುಶಾಂತ್ ಶೆಟ್ಟಿ ಕಂಬಳಬೆಟ್ಟು, ದಿಲ್ಸಾದ್ ಬಾನು, ಶಶಿಕಲಾ, ವಿನೋದ್ ನೂಜಿ, ಸದಾಶಿವ ಅಮೈ, ಬಾಲಕೃಷ್ಣ ಅಮೈ, ಪ್ರಭಾಕರ ಅಮೈ, ಕೀರ್ತನ್ ಅಮೈ, ಅಂಕಿತ್ ಅಮೈ , ಜಯದೀಪ್ ಅಮೈ, ಜಗದಶೀಶ್ ಅಮೈ, ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ಸುಮಿತ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.

- Advertisement -

Related news

error: Content is protected !!