ಹಣ ಹೂಡಿಕೆ ಮಾಡಿದ್ರೆ ಡಬಲ್ ಕೊಡುವುದಾಗಿ ನಂಬಿಸಿ ಕೋಟಿ ಕೋಟಿ ಹಣದೊಂದಿಗೆ ದಂಪತಿ ಎಸ್ಕೇಪ್ ಆಗಿರುವ ಘಟನೆ ನೆಲಮಂಗಲ ಬಳಿಯ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ಪತಿ ಮುರಳಿ ಹಾಗೂ ಪತ್ನಿ ಕಲ್ಪನಾ ಕೋಟಿ ಕೋಟಿ ವಂಚಿಸಿ ಪರಾರಿಯಾಗಿರುವ ದಂಪತಿ. ಬರೋಬ್ಬರಿ ಎರಡು ಕೋಟಿಗೂ ಅಧಿಕ ಹಣದೊಂದಿಗೆ ದಂಪತಿ ಎಸ್ಕೇಪ್ ಆಗಿದ್ದಾರೆ. ರಾತ್ರೋರಾತ್ರಿ ಬಾಡಿಗೆ ಮನೆಗೆ ಬೀಗ ಹಾಕಿ ಹಣದೊಂದಿಗೆ ದಂಪತಿ ನಾಪತ್ತೆಯಾಗಿದ್ದಾರೆ. ಹಣ ಹೂಡಿಕೆ ಮಾಡಿದರೆ ಡಬಲ್ ಕೊಡುವುದಾಗಿ ದಂಪತಿ ಜನರಿಗೆ ನಂಬಿಸಿದ್ದಾರೆ. ಇದೀಗ ಹಣದೊಂದಿಗೆ ದಂಪತಿ ಪರಾರಿಯಾಗಿದ್ದು, ಮಕ್ಕಳ ವಿದ್ಯಾಭ್ಯಾಸ, ಮದುವೆ, ಸೈಟ್ ಮನೆಕಟ್ಟಲು ಕೂಡಿಟ್ಟ ಹಣ ಕಳೆದುಕೊಂಡು ಜನರು ಕಂಗಾಲಾಗಿದ್ದಾರೆ.
ದಂಪತಿ ತಂಗಿದ್ದ ಬಾಡಿಗೆ ಮನೆಯ ಬಳಿ ಮೋಸಹೋದ ಜನರು ಜಮಾಯಿಸಿದ್ದು, ಕಣ್ಣೀರಿಡುತ್ತ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಇತ್ತ ಹಣವೂ ಇಲ್ಲದೇ, ದಂಪತಿಯೂ ನಾಪತ್ತೆಯಾಗಿದ್ದರಿಂದ ನೊಂದ ಜನರು ಪೊಲೀಸರ ಮೊರೆಹೋಗಿದ್ದಾರೆ. ಮಹಿಳೆಯರು, ವೃದ್ಧರು, ಅಂಗವಿಕಲರಿಗೂ ಈ ದಂಪತಿ ಮೋಸ ಮಾಡಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ದೂರು ದಾಖಲಾಗಿದೆ.