ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಮತ್ತು ವಾಣಿಜ್ಯ ನಗರಿ ಮಂಗಳೂರನ್ನು ಬೆಸೆಯಲು ಡಿ.10 ರಿಂದ ವಿಮಾನ ಸಂಚಾರ ಪ್ರಾರಂಭಗೊಳ್ಳಲಿದೆ.
ಮಂಗಳೂರಿನಲ್ಲಿ ಬಂದರು ಇರುವ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಲು ವಿಮಾನ ಸಂಚಾರ ಸಹಕಾರಿಯಾಗಲಿದೆ. ಅಲ್ಲದೆ ಮಂಗಳೂರಿನ ನಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿ ಮೈಸೂರಿನಲ್ಲಿ ನೆಲೆಸಿದ್ದು, ಮೈಸೂರು-ಮಂಗಳೂರು ನಡುವೆ ವಿಮಾನ ಸಂಚಾರ ಪ್ರಾರಂಭಿಸಬೇಕೆಂದು ಎಫ್’ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಹಾಗೂ ಇತರರು ಸಂಸದ ಪ್ರತಾಪ್ ಸಿಂಹ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಸಂಸದ ಪ್ರತಾಪ್ ಸಿಂಹ ಅವರ ವಿಶೇಷ ಪ್ರಯತ್ನದಿಂದ ಕೊನೆಗೂ ಮಂಗಳೂರು ಹಾಗೂ ಮೈಸೂರು ನಿವಾಸಿಗಳ ಪ್ರಮುಖ ಬೇಡಿಕೆ ಈಡೇರಿದಂತಾಗಿದೆ.
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ಉಡಾನ್ ಯೋಜನೆಯಡಿ ಡಿ.10 ರಿಂದ ವಿಮಾನ ಸಂಚಾರ ಪ್ರಾರಂಭಿಸಲಿದೆ. ಸದ್ಯ ವಿಮಾನ ಸೇವೆ ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ದೊರೆಯಲಿದ್ದು, ಉತ್ತಮ ಸ್ಪಂದನೆ ದೊರೆತರೆ ವಾರದ ಎಲ್ಲ ದಿನವೂ ಸೇವೆ ವಿಸ್ತರಣೆಗೊಳ್ಳುವ ನಿರೀಕ್ಷೆ ಇದೆ.
ವಿಮಾನ ಮೈಸೂರಿನಿಂದ ಬೆಳಗ್ಗೆ 11.15ಕ್ಕೆ ಹೊರಟು ಮಂಗಳೂರಿಗೆ ಮಧ್ಯಾಹ್ನ 12.15ಕ್ಕೆ ತಲುಪಲಿದೆ. ಮಂಗಳೂರಿನಿಂದ ಮಧ್ಯಾಹ್ನ 12.40 ಹೊರಡುವ ವಿಮಾನ ಮೈಸೂರಿಗೆ ಮಧ್ಯಾಹ್ನ 1.40ಕ್ಕೆ ತಲುಪಲಿದೆ.