ಇಬ್ಬರು ಆರೋಪಿಗಳ ಬಂಧನ



ಬಂಟ್ವಾಳ: ಮಡಂತ್ಯಾರು ಬಳಿ ಇರುವ ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ಲಕ್ಷಾಂತರ ರೂಪಾಯಿ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಬಂದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಅಡವಿಡಲು ನಕಲಿ ಚಿನ್ನದ ಸರಗಳನ್ನು ನೀಡಿದ ಕುಳ ಕಲ್ಲಂದಡ್ಕ ನಿವಾಸಿ ಅಬ್ದುಲ್ ನಜೀರ್ ಹಾಗೂ ಕಲ್ಲಡ್ಕ ಸಮೀಪದ ಬೋಳಂತೂರು ಬೀರುಕೋಡಿ ನಿವಾಸಿ ಪ್ರಮೋದ್. ಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಮಡಂತ್ಯಾರು ಶಾಖಾ ವ್ಯವಸ್ಥಾಪಕಿ ಅಶ್ವಿತಾ ಅವರು ದೂರು ನೀಡಿದ್ದು, ಫೆ. 2 ರಂದು ಬೆಳಿಗ್ಗೆ ಇಬ್ಬರು ಗ್ರಾಹಕರು ಬ್ಯಾಂಕ್ ಗೆ ಬಂದು ಚಿನ್ನ ಅಡವಿಡಲು ಇದೆ ಎಂದು ತಿಳಿಸಿ ಮೂರು ಚಿನ್ನದ ಸರಗಳನ್ನು ನೀಡಿದ್ದಾರೆ. ಶಾಖಾ ವ್ಯವಸ್ಥಾಪಕರು ಚಿನ್ನವನ್ನು ಪರಿವೀಕ್ಷಕರಲ್ಲಿ ಪರಿಶೀಲನೆ ನಡೆಸಿದಾಗ ಮೂರು ಚಿನ್ನದ ಸರಗಳು ನಕಲಿ ಎಂದು ತಿಳಿದುಬಂದಿದೆ.
ನಕಲಿ ಚಿನ್ನವನ್ನು ಅಡವಿಡಲು ಬಂದ ಆರೋಪಿಗಳ ಬಗ್ಗೆ ಪುಂಜಾಲಕಟ್ಟೆ ಪೋಲೀಸರಿಗೆ ಮಾಹಿತಿ ನೀಡಿ, ಆರೋಪಿಗಳನ್ನು ಅವರ ವಶಕ್ಕೆ ಒಪ್ಪಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.








