ಜೀಪಿನಲ್ಲಿ ಪ್ರಯಾಣಿಸಿ ಸ್ಥಳ ಪರಿಶೀಲನೆ ನಡೆಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಪುತ್ತೂರು, ಮಾ. 29: ಜನರಿಗೆ ಅನುಕೂಲವಾಗುವ ಸೇತುವೆಯಾಗಿದ್ದರೆ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಮಾಣಿಲ ಗ್ರಾಮದ ಕಾಮಜಾಲು–ಪೂನಡ್ಕ ಮೂಲಕ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಸ್ಥಳವನ್ನು ಭಾನುವಾರ ಪರಿಶೀಲಿಸಿ ಅವರು ಮಾತನಾಡಿದರು.ಪೂನಡ್ಕ ಸೇತುವೆ ಸುಮಾರು ಐವತ್ತು ವರ್ಷಗಳ ಹಿಂದಿನ ಬೇಡಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಾದಕ–ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ. ವರದಿ ಆಧಾರದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸೇತುವೆ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ ಎಂದು ಸಚಿವರು ತಿಳಿಸಿದರು.ಕಳೆದ ಎರಡು ದಶಕಗಳಿಂದ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಸಮರ್ಪಕ ಆದ್ಯತೆ ನೀಡಲಾಗಿಲ್ಲ.
ಕೇರಳ ಸಂಪರ್ಕ ಕಲ್ಪಿಸುವ ಇನ್ನೂ ಎರಡು–ಮೂರು ಸೇತುವೆಗಳ ನಿರ್ಮಾಣಕ್ಕೆ ಪ್ರಸ್ತಾವನೆಯಿದ್ದು, ಸುಳ್ಯ ಸೇರಿದಂತೆ ವಿವಿಧ ಭಾಗಗಳಿಂದ ಬೇಡಿಕೆ ಬಂದಿದೆ. ಜನರಿಗೆ ತ್ವರಿತ ಸಂಪರ್ಕ ಕಲ್ಪಿಸುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ದುರಸ್ತಿ ಮತ್ತು ಅಗಲೀಕರಣ ಕಾರ್ಯಗಳು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಕೆಲವು ಹೊಸ ಸೇತುವೆಗಳ ನಿರ್ಮಾಣದ ಜೊತೆಗೆ, ಕೆಲ ಸೇತುವೆಗಳನ್ನು ಅಗಲೀಕರಣ ಮತ್ತು ದುರಸ್ತಿ ಮಾಡುವ ಕಾರ್ಯಗಳು ಪ್ರಗತಿಯಲ್ಲಿವೆ. ಎಸ್ಎಚ್ಡಿಪಿ ಯೋಜನೆಯಡಿ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿವೆ ಎಂದು ಹೇಳಿದರು.ಮಳೆಯ ಅವಧಿಯಲ್ಲಿ ಕಾಮಗಾರಿಗಳಿಗೆ ಹಾನಿಯಾಗದಂತೆ ಅಕ್ಟೋಬರ್ ನಂತರವೇ ಮುಖ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಗುತ್ತಿಗೆ ಪ್ರಕ್ರಿಯೆ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಕುಕ್ಕಾಜೆ ಶ್ರೀಕೃಷ್ಣ ಗುರೂಜಿ ಸೇರಿದಂತೆ ಎಂ.ಎಸ್. ಮಹಮ್ಮದ್, ಗೋಪಾಲಕೃಷ್ಣ ನಾಯಕ್ ಮುಕ್ವೆ, ಶ್ರೀಧರ್ ಬಾಳೆಕಲ್ಲು, ವಿಷ್ಣು ಕುಮಾರ್ ಕೊಮ್ಮುಂಜೆ, ಜಯರಾಮ್ ಬಲ್ಲಾಳ್, ಕೃಷ್ಣ ಪೂಜಾರಿ, ಗಣೇಶ್ ಭಟ್ ದೇಲಂತಮಜಲು, ವಿಷ್ಣು ಕನ್ನಡಗುಳಿ, ರಾಮಕೃಷ್ಣ ಅಡ್ಯಂತಾಯ, ಕರೀಂ ಕುದ್ದುಪದವು ಮತ್ತು ಇತರರು ಉಪಸ್ಥಿತರಿದ್ದರು.








