ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಬಳಿ ಇಂಡಸ್ಟ್ರಿಯಲ್ ಟೌನ್ಸ್, ಲಾಜಿಸ್ಟಿಕ್ಸ್ ಪಾರ್ಕ್ಸ್, ಸ್ಮಾರ್ಟ್ ಸಿಟೀಸ್ ಮತ್ತು ಟೌನ್ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈಗಾಗಲೇ ಇದರ ಸಂಬಂಧ ಅನುಮತಿ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಟಿಪ್ಪಣಿ ಸಿದ್ಧಪಡಿಸಿದೆ ಎಂದರು.
ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಸಚಿವ ನಿತಿನ್ ಗಡ್ಕರಿ ಅವರು, ವಿಶ್ವದರ್ಜೆಯ ಹೆದ್ದಾರಿ ಜಾಲ ನಿರ್ಮಾಣ ಮಾಡುವುದು ಕೇಂದ್ರ ಸರ್ಕಾರ ಗುರಿ. ಹಾಲಿ ಹೆದ್ದಾರಿ ಯೋಜನೆಗಳನ್ನು ರಿವೈಸ್ ಮಾಡಲು ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.
ಇಡೀ ದೇಶಾದ್ಯಂತ ಹೆದ್ದಾರಿ ಇರುವ ಎಲ್ಲಾ ಕಡೆ ಸುಮಾರು 400ಕ್ಕೂ ಹೆಚ್ಚು ಪ್ರದೇಶಗಳಲ್ಲಿ 2.5 ಲಕ್ಷ ಕೋಟಿ ರೂ.ವೆಚ್ಚದಲ್ಲಿ ಸುರಂಗ ಮಾರ್ಗಗಳನ್ನು ನಿರ್ಮಿಸಲಿದ್ದೇವೆ. ಇದಕ್ಕಾಗಿ ಮೂಲ ಸೌಕರ್ಯ ನಿಧಿಯನ್ನು ಶೇ.30ರಷ್ಟು ಅಂದರೆ 5.54 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದೇವೆ ಎಂದು ತಿಳಿಸಿದರು.
ಇನ್ನು, ಕೊರೊನಾದಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಲಕ್ಷಾಂತರ ಜನ ಈ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಯೋಜನೆಗಳ ಮುಖಾಂತರ ಇಂತವರಿಗೆ ಉದ್ಯೋಗ ಸೃಷ್ಟಿಸುವುದು ನಮ್ಮ ಪ್ರಮುಖ ಉದ್ದೇಶ ಎಂದು ಮಾಹಿತಿ ನೀಡಿದರು.