ಪೋಲಿಸ್ ಪೇದೆಯ ಕಾರ್ಯಕ್ಕೆ ಕೈಗೂಡಿಸಿದ MNG ಫೌಂಡೇಶನ್ ಸಿಬ್ಬಂದಿಗಳು.
ನೆಲ್ಯಾಡಿ:- ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡ್ ಘಾಟ್ ಮದ್ಯೆ ಸಿಮೆಂಟ್ ಹೊತ್ತುಕೊಂಡು ಮಂಗಳೂರು ಹೊರಟಿದ್ದ ಬೃಹತ್ ಗಾತ್ರದ ಟ್ರಕ್ ಒಂದಕ್ಕೆ ಹಠಾತನೆ ಬೆಂಕಿ ಹಿಡಿದಿದ್ದು, ಲಾರಿ ಭಾಗಶ: ಸುಟ್ಟುಹೋಗಿರುವ ಘಟನೆ ಸೋಮವಾರ (ಆ.17ರಂದು )ಬೆಳಿಗ್ಗೆ ನಡೆದಿದೆ.
ಟ್ರಕ್ ಗೆ ಪೂರ್ಣ ಆವರಿಸಿಕೊಂಡ ಬೆಂಕಿ ಹೊತ್ತಿ ಉರಿಯಲು ಪ್ರಾರಂಭಿಸಿತ್ತು.ಬೆಂಕಿ ತಗುಲಿರುವುದು ಗಮನಕ್ಕೆ ಬಂದ ಕೂಡಲೇ ಚಾಲಕ ಲಾರಿ ನಿಲ್ಲಿಸಿದ್ದು,ಆ ಸಂಧರ್ಭದಲ್ಲಿ ಸ್ಥಳದಲ್ಲಿ ಗುಂಡ್ಯ ಪೋಲಿಸ್ ಠಾಣೆಯ ಪೇದೆ ನವೀನ್ ಎಂಬವರು ಹಾಜರಿದ್ದು, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಉರಿಯುತ್ತಿರುವ ಬೆಂಕಿ ಕೈಮೀರಿ ಹೋಗುವ ಹಂತಕ್ಕೆ ತಲುಪಿತ್ತು.
ಒಂದು ಕಡೆ ಆ ದಾರಿಯಾಗಿ ಸಾಗುತ್ತಿದ್ದ ಪ್ರಯಾಣಿಕರಲ್ಲಿ ಪೇದೆ ನವೀನ್ ಅವರು ಬಕೆಟ್ ಮೂಲಕ ನೀರು ಹಾಕಿ ಎಲ್ಲರೂ ಸೇರಿ ಪ್ರಯತ್ನಿಸಿದರೆ ನಮ್ಮಿಂದ ಉರಿಯುತ್ತಿರುವ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬರುವುದರೊಳಗೆ ನಂದಿಸಲು ಸಾಧ್ಯವಿದೆ, ಬನ್ನಿ ಸಹಕರಿಸಿ ಎಂದು ಎಷ್ಟೇ ಅಂಗಲಾಚಿದರೂ ಕೂಡ ಇದು ಅಗ್ನಿಶಾಮಕ ದಳದ ವಾಹನ ಬರದೆ ನಂದಿಸಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಿದ್ದರು.
ನಂತರದ ಸನ್ನಿವೇಶದಲ್ಲಿ ನಡೆದ ಚಿತ್ರಣವೇ ಬೇರೆಯಾಗಿತ್ತು. ಆ ದಾರಿಯಾಗಿ ಮಂಗಳೂರು ಕಲ್ಲಾಪುವಿನ ಅನೀಸ್ ಎಂಬ ಪುಟ್ಟ ಮಗುವಿನ ಲಿವರ್ ಶಸ್ತ್ರಚಿಕಿತ್ಸೆಯ ಭಾಗವಾಗಿ ಆ ಮಗುವಿನ ಕುಟುಂಬದ ಜೊತೆಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ತೆರಳುತ್ತಿದ್ದ MNG ಫೌಂಡೇಶನ್ ಸಂಸ್ಥೆಯ ಪದಾಧಿಕಾರಿಗಳು ಪೇದೆ ನವೀನ್ ಜೊತೆ ಸಂಪೂರ್ಣ ಸಹಕರಿಸಿಕೊಂಡು ಕ್ಷಣ ಮಾತ್ರದಲ್ಲಿ ಕಾರ್ಯಪ್ರವೃತ್ತರಾಗಿ ಎರಡು-ಮೂರು ಬಕೆಟ್ ಸಂಗ್ರಹಿಸಿ ನೀರು ಹಾಕುವ ಮೂಲಕ ದಗದಗನೆ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಈ ಮಾನವೀಯ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಪೋಲಿಸ್ ಪೇದೆ ನವೀನ್ ಮತ್ತು MNG ಫೌಂಡೇಶನ್ ಸಂಸ್ಥೆಯ ಪದಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಯಾಣಿಕರಿಂದ ಮತ್ತು ಸ್ಥಳೀಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.