ಹಳೆಯಂಗಡಿ: ಮಠಕ್ಕೆ ನುಗ್ಗಿದ ಕಳ್ಳರು ದೇವರ ಆಭರಣಗಳು ಹಾಗೂ ಕಾಣಿಕೆ ಡಬ್ಬಿಗಳನ್ನು ಕದ್ದಿರುವ ಘಟನೆ ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ವಿನಾಯಕ ಮಠದಲ್ಲಿ ಮಂಗಳವಾರ ಬೆಳಿಗ್ಗೆ ತಿಳಿದುಬಂದಿದೆ.
ಇದೊಂದು ಪುರಾತನ ಮಠವಾಗಿದ್ದು, ಇದು ವಿಶ್ವಕರ್ಮ ಸಮುದಾಯಕ್ಕೆ ಸೇರಿದೆ. ಕಳೆದ ಎರಡು ವರ್ಷಗಳ ಹಿಂದೆ ನವೀಕರಣಗೊಂಡಿತ್ತು. ಇಂದು ಬೆಳಿಗ್ಗೆ ದೇವರ ನಿತ್ಯ ಪೂಜೆಗೆಂದು ಅರ್ಚಕರು ಬಾಗಿಲು ತೆರೆದಾಗ ಈ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಮಠದ ಹಿಂದಿನ ಬಾಗಿಲು ಒಡೆದು ಒಳನುಗ್ಗಿ ವಿನಾಯಕ ದೇವರ ಮತ್ತು ಶ್ರೀ ದೇವಿಯ ಬೆಳ್ಳಿಯ ಪ್ರಭಾವಳಿಗಳು, ಎರಡೂ ದೇವರ ಬೆಳ್ಳಿಯ ಮುಖ ಕವಚಗಳು ಹಾಗೂ ಇನ್ನಿತರ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಸೇರಿದಂತೆ ಎರಡು ಕಾಣಿಕೆ ಡಬ್ಬಿಗಳನ್ನು ಕಳ್ಳರು ಕದ್ದಿದ್ದಾರೆ. ಸುಮಾರು 7 ಕೆ.ಜಿ ಬೆಳ್ಳಿ, ಒಂಬತ್ತು ಗ್ರಾಂ ದೇವರ ಚಿನ್ನದ ಆಭರಣಗಳು ಕಳವಾಗಿದೆ ಎಂದು ಅಂದಾಜಿಸಿದ್ದಾರೆ. ಈ ಘಟನೆಯ ಬಗ್ಗೆ ಮುಲ್ಕಿ ಠಾಣಾಧಿಕಾರಿ ಕುಸುಮಾಧಾರನ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.