ವ್ಯಾಪಾರದಲ್ಲಿ ನಷ್ಟ ಅನುಭವಿಸಿ ಹತಾಶನಾದ ಪತಿಯೊಬ್ಬ ಕೋಪದ ಕೈಗೆ ಬುದ್ಧಿ ಕೊಟ್ಟು ಮಾರಕಾಸ್ತ್ರದಿಂದ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾದ ಘಟನೆ ಹಾಸನದ ಬೇಲೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
17 ವರ್ಷಗಳ ಹಿಂದೆ ಜಗದೀಶ್-ಅಶ್ವಿನಿ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಒಂದೂವರೆ ದಶಕಗಳ ಕಾಲ ಜೊತೆಯಾಗಿಯೇ ಕಷ್ಟಸುಖದಲ್ಲಿ ಭಾಗಿಯಾಗಿದ್ದರು. ಜೀವನಕ್ಕಾಗಿ ಮೆಡಿಕಲ್ ಶಾಪ್ ತೆರೆದಿದ್ದ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮೆಡಿಕಲ್ ಶಾಪ್ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಾ ಬಂದ ಜಗದೀಶ್, ಆ ಕೋಪವನ್ನು ಹೆಂಡತಿ ಮೇಲೆ ತೀರಿಸಿಕೊಳ್ಳಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಪದೇ ಪದೇ ಜಗಳ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಗಂಡನ ವರ್ತನೆಯಿಂದ ಬೇಸತ್ತ ಅಶ್ವಿನಿ, ಕಳೆದ ಐದಾರು ತಿಂಗಳ ಹಿಂದೆ ಪತಿಯಿಂದ ದೂರವಾಗಿ ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದರು. ಈ ಮಧ್ಯೆ ಆರೋಪಿ ಜಗದೀಶ್, ವಾರದಲ್ಲಿ ಎರಡು ಮೂರು ಬಾರಿ ಆಕೆಯ ಮನೆಗೆ ಬಂದು ಗಲಾಟೆ ಮಾಡಿ ಪತ್ನಿಗೆ ಚಿತ್ರಹಿಂಸೆ ಕೊಡುತ್ತಿದ್ದನಂತೆ. ಎಂದಿನಂತೆ ಮಕ್ಕಳು ಶಾಲೆಗೆ ತೆರಳಿದ್ದಾಗ ಬಂದ ಆತ, ಪತ್ನಿಯನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬೇಲೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲು ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.