


ಬೀದಿ ನಾಯಿಯೊಂದು ಮನೆ ಅಂಗಳದಲ್ಲಿ ಆಡುತ್ತಿದ್ದ ಮಗುವಿನ ಮೇಲೆ ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಬೀದಿ ನಾಯಿ ದಾಳಿಯಿಂದ ಗಾಯಗೊಂಡಿರುವ ಎರಡು ವರ್ಷದ ಮಹಮದ್ ಹಮಾಜ್ ಮತ್ತು ಮಗುವಿನ ತಾತಾ ಅಕ್ರಂ ಪಾಷಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಲೂರು ಪಟ್ಟಣದ ದಾವೂದ್ ಸಾಬ್ ಬೀದಿಯಲ್ಲಿ ಗೆಂಡೆಹಳ್ಳಿ ಗ್ರಾಮದ ಮಹಮದ್ ಎಂಬವರ ಪುತ್ರ ಮಹಮದ್ ಹಮಾಜ್ ಆಟವಾಡುತ್ತಿದ್ದ. ಈ ವೇಳೆ ಬೀದಿ ನಾಯಿಯೊಂದು ಮಗುವಿನ ಮೇಲೆ ದಾಳಿ ನಡೆಸಿದೆ. ಮಗುವನ್ನು ರಕ್ಷಿಸಲು ಬಂದ ಅಕ್ರಂ ಪಾಷಾ ಮೇಲೂ ದಾಳಿ ನಡೆಸಿದ್ದು, ಇಬ್ಬರಿಗೂ ಗಾಯಗಳಾಗಿವೆ.
ಮಗುವಿನ ಕುತ್ತಿಗೆಯ ಭಾಗಕ್ಕೇ ನಾಯಿ ಕಚ್ಚಿದ್ದು, ತಲೆಗೂ ಗಾಯಗೊಳಿಸಿದೆ. ಅಕ್ರಮ್ ಪಾಷಾ ಅವರ ಕೈ ಮತ್ತು ಎದೆ ಭಾಗಕ್ಕೆ ಗಾಯ ಮಾಡಿದೆ. ದಾವೂದ್ ಸಾಬ್ ಬೀದಿಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ನಡೆಸುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ದಾರಿಹೋಕರ ಮೇಲೆ ಹಲವಾರು ಬಾರಿ ಶ್ವಾನಗಳು ದಾಳಿ ನಡೆಸಿವೆ. ಈ ಬಗ್ಗೆ ಈಗಾಗಲೇ ಪೊಲೀಸರು ಹಾಗೂ ಪುರಸಭೆಗೆ ದೂರು ನೀಡಲಾಗಿದೆ.








