ಮನೆಯ ಎರಡನೇ ಮಹಡಿಯಿಂದ ಬಿದ್ದು ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಬದ್ರಿನಾಥ ಕಾಲೋನಿಯಲ್ಲಿ ನಡೆದಿದೆ.
ಶಿಲ್ಪಾ (28) ಮೃತ ಮಹಿಳೆ . ಈಕೆ ಮನೆಯ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತಳ ಪತಿ ಶರತ್ ಹಾಗೂ ಅತ್ತೆ-ಮಾವ ಸೇರಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಶಿಲ್ಪಾ ಸಂಬಂಧಿಕರು ಆರೋಪಿಸಿದ್ದಾರೆ.
ಘಟನೆಯಿಂದಾಗಿ ಆಕ್ರೋಶದಲ್ಲಿ ಶರತ್ ತಂದೆಗೆ ಶಿಲ್ಪಾ ಸಂಬಂಧಿಕರು ಥಳಿಸಿದ್ದಾರೆ. ರಾತ್ರಿ ಜಗಳ ಮಾಡಿ ಎರಡನೇ ಮಹಡಿಯಿಂದ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ಒಂದು ವರ್ಷದ ಹಿಂದೆ ಶಿಲ್ಪಾ ಹಾಗೂ ಶರತ್ ಮದುವೆಯಾಗಿದ್ದು, ಮದುವೆಯಾದಾಗಿನಿಂದಲೂ ಪತಿ-ಪತ್ನಿ ನಡುವೆ ಹೊಂದಾಣಿಕೆಯಾಗದೇ ಆಗಾಗ ಜಗಳಗಳು ನಡೆಯುತ್ತಿದ್ದವು. ಈ ಕುರಿತು ಕುಟುಂಬದ ಹಿರಿಯರು ಸಂಧಾನ ಮಾಡಿದ್ದರು. ಆದರೂ ಕೂಡ ಸಮಸ್ಯೆಗಳು ಬಗೆಹರಿದಿರಲಿಲ್ಲ ಎಂದು ಶಿಲ್ಪಾ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಘಟನೆಯ ಬಳಿಕ ಶಿಲ್ಪಾ ಪತಿ ಶರತ್ ಪರಾರಿಯಾಗಿದ್ದಾನೆ. ಪರಾರಿಯಾಗಿರುವ ಪತಿ ಬರುವವರೆಗೂ ಆಕೆಯ ಮೃತದೇಹ ಎತ್ತಲು ಬಿಡಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.