ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಯುವಕನನ್ನು ಪರಿಚಯ ಮಾಡಿಕೊಂಡ ಖದೀಮನೊಬ್ಬ, ಆತನ ಹೆಸರಿನಲ್ಲಿ 2 ಬ್ಯಾಂಕ್ ಖಾತೆಗಳನ್ನು ತೆರೆದು ತನ್ನ ಅಕ್ರಮ ಕೆಲಸಕ್ಕೆ ಬಳಸಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಕಲಘಟಗಿ ಮೂಲದ ಮಾಲತೇಶ ಅವರಿಗೆ ಇನ್ಸ್ಟಾಗ್ರಾಂ ಮೂಲಕ ದೇವದಾಸ್ ಪರಿಚಯವಾಗಿದ್ದ. ಮೇ.2019ರಲ್ಲಿ ಮೊಬೈಲ್ ಫೋನ್ ಗೆ ಕರೆ ಮಾಡಿ, ನಾನು ಮತ್ತು ನನ್ನ ಸ್ನೇಹಿತರಿಬ್ಬರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದೇವೆ.
ಕಾಲೇಜು ಶುಲ್ಕ ಪಾವತಿಸಲು ಸ್ಥಳೀಯವಾಗಿ ಬ್ಯಾಂಕ್ ಖಾತೆ ತೆರೆಯಲು ಹೇಳಿದ್ದಾರೆ ಎಂದು ಕೇಳಿಕೊಂಡಿದ್ದಾರೆ.ಅವರ ಮಾತು ನಂಬಿದ ಮಾಲತೇಶ ತಮ್ಮ ಹಾಗೂ ಸಹೋದರನ ಹೆಸರಿನಲ್ಲಿ ಧಾರವಾಡದ ಬ್ಯಾಂಕ್ ಆಪ್ ಬರೋಡಾ ಶಾಖೆಯಲ್ಲಿ ಖಾತೆಗಳನ್ನು ತೆರೆದಿದ್ದಾರೆ. ಅದಕ್ಕೆ ಆರೋಪಿ ದೇವದಾಸ್ ಕೊಟ್ಟ ಮೊಬೈಲ್ ನಂಬರ್ ಲಿಂಕ್ ಮಾಡಿದ್ದರು.
ಆದರೆ ಆರೋಪಿಗಳು 2019 ರಿಂದ ಈ ವರೆಗೆ ಬ್ಯಾಂಕ್ ಖಾತೆ ದುರುಪಯೋಗ ಮಾಡಿಕೊಂಡಿದ್ದಾರೆ. ಅನಧಿಕೃತ ಹಣ ವರ್ಗಾವಣೆ ಮಾಡಿದ್ದಾರೆ. ಮಾಲತೇಶ ಅವರು ಬ್ಯಾಂಕ್ ಗೆ ಹೋಗಿ ಶಿಕ್ಷಣ ಸಾಲದ ಬಗ್ಗೆ ವಿಚಾರಿಸಿದಾಗ ವಂಚನೆ ಬಯಲಾಗಿದ್ದು, ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.