ಜಡಿ ಮಳೆ, ಸುಡು ಬಿಸಿಲ ಬೇಗೆಗೆ ಆ ಒಂದು ಕುಟುಂಬ ದಿನನಿತ್ಯ ಸಂಕಷ್ಟವನ್ನು ಅನುಭವಿಸುತ್ತಿತ್ತು. ಅದೆಷ್ಟೋ ಬಾರಿ ಸ್ಥಳಿಯ ಸರ್ಕಾರಕ್ಕೆ ಒಂದು ಸೂರು ನಿರ್ಮಿಸಲು ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ. ಬದುಕು ದುಸ್ಥರಗೊಂಡ ಬಾಳಿಗೆ ಆಶಾಕಿರಣವಾಗಿದ್ದು ಹ್ಯೂಮಾನಿಟಿ ಸಂಸ್ಥೆ ಹಾಗೂ ಊರಿನ ಹತ್ತಾರು ಸಮಸ್ತರು. ಅಷ್ಟಕ್ಕೂ ಸಮಸ್ಯೆ ಏನು.? ಅದಕ್ಕೆ ಪರಿಹಾರ ದೊರಕ್ಕಿದ್ದು ಹೇಗೆ ಮುಂದೆ ಓದಿ..
ವಿಟ್ಲ ಸಮೀಪದ ಇಡ್ಕಿದು ಗ್ರಾಮದ ನೆರ್ಲಾಜೆಯಲ್ಲಿ ಚಂದ್ರಯ್ಯ ಆಚಾರ್ಯ ಎನ್ನುವವರ ಕುಟುಂಬ ಕಳೆದ ಐದಾರು ವರ್ಷಗಳಿಂದ ವಾಸಿಸಲು ಯೋಗ್ಯವೇ ಇಲ್ಲದ ಮನೆಯಲ್ಲಿ ದಿನವನ್ನು ದೂಡುತ್ತಿದ್ದರು. ಸರಿಯಾದ ಮನೆಯಿಲ್ಲದೆ ತನ್ನ ಹೆಂಡತಿ, ೩ ಮಕ್ಕಳನ್ನು ಇದೇ ಜೋಪಡಿಯಲ್ಲಿ ಮಳೆ, ಚಳಿ, ಬೇಸಿಗೆಯೆನ್ನದೆ ದಿನವನ್ನು ದೂಡುತ್ತಿದ್ದರು. ಚಂದ್ರಯ್ಯ ಆಚಾರ್ಯ ಕೂಲಿ ಕೆಲಸ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು.
ಚಂದ್ರಯ್ಯ ಆಚಾರ್ಯ ಅವರು ಸ್ಥಳೀಯ ಆಡಳಿತಕ್ಕೆ ಅದೆಷ್ಟೋ ಬಾರಿ ಮನೆ ನಿರ್ಮಿಸಲು ಅನುದಾನ ಕಲ್ಪಿಸಿಕೊಡುವಂತೆ ಮನವಿಯನ್ನು ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದ್ರಿಂದ ಬೇಸತ್ತ ಇವರು ಸ್ಥಳೀಯ ಶಿಕ್ಷಕರಾಗಿರುವ ಮಹಾಲಿಂಗೇಶ್ವರ ಭಟ್ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇವರ ಸ್ಥಿತಿಯನ್ನು ಗಮಿನಿಸಿ ಮನೆ ನಿರ್ಮಿಸಲು ಸರ್ಕಾರದ ಅನುದಾನ ಕೋರಿಕೊಂಡು ಕಛೇರಿಗಳಿಗೆ ಅಲೆದಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇದ್ರಿಂದಾಗಿ ತಾವೇ ಮುಂದೆ ನಿಂತು ಊರ ದಾನಿಗಳ ಸಹಾಯ ಹಸ್ತದಿಂದ ಮನೆ ನಿರ್ಮಾಣ ಮಾಡಲು ಮುಂದಾದ್ರು. ಈ ವೇಳೆ ಆರ್ಥಿಕ ಬಿಕ್ಕಟ್ಟು ಎದುರಾಯಿತು. ಇವರ ಆರ್ಥಿಕ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಟ್ಟಿದ್ದು ಹ್ಯೂಮಾನಿಟಿ ಸಂಸ್ಥೆ.
ಹ್ಯೂಮಾನಿಟಿ ಸಂಸ್ಥೆಯ 701ನೇ ಪ್ರಾಜೆಕ್ಟ್ ಇದಾಗಿದ್ದು ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಇದಕ್ಕೆ ಸರಿಸುಮಾರು ಎರಡುವರೆ ಲಕ್ಷದಷ್ಟು ಹಣವನ್ನು ಹ್ಯೂಮಾನಿಟಿ ಸಂಸ್ಥೆ ನೀಡಿ ಸಹಕರಿಸಿದೆ. ಉಳಿದ ಮೊತ್ತವನ್ನು ಊರಿನ ಮಂದಿ ಭರಿಸಿದ್ದಾರೆ. ಹ್ಯೂಮನಿಟಿ ಸಂಸ್ಥೆಯ ಅಭಿಮಾನಿ ಬಳಗ ವಿಟ್ಲ ಇವರು ಶ್ರಮದಾನ ಮಾಡಿದ್ದಾರೆ. ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಇವರೂ ಸಹ ಸಹಾಯ ಹಸ್ತ ಚಾಚಿದ್ದಾರೆ. ಪೈಂಟಿ0ಗ್, ನೀರಿನ ವ್ಯವಸ್ಥೆ, ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಟ್ಟಿದ್ದಾರೆ.
ನೊಂದ ಬಾಳಿಗೆ ಹ್ಯೂಮನಿಟಿ ಹಾಗೂ ಊರ ಮಂದಿ ಭರವಸೆಯ ಬೆಳಕಾಗಿದ್ದು ಗೃಹಪ್ರವೇಶ ಕಾರ್ಯಕ್ರಮ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಮನೆ ಹಸ್ತಂತಾರ ಕಾರ್ಯಕ್ರಮದಲ್ಲಿ ಹ್ಯೂಮನಿಟಿ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರೋಶನ್ ಬೆಳ್ಮಣ್, ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಇಡ್ಕಿದು ಗ್ರಾ.ಪಂ ಸದಸ್ಯ ಪುರುಷೋತ್ತಮ್, ಬಲಿಪಗೂಲಿ ರಾಜೇಂದ್ರ, ಮಹಾಲಿಂಗೇಶ್ವರ ಭಟ್, ಹ್ಯೂಮನಿಟಿ ಸಂಸ್ಥೆಯ ಅಭಿಮಾನಿ ಬಳಗ ವಿಟ್ಲ ಇದರ ಮೋರಿಸ್ ಹಾಗೂ ತಂಡ ಉಪಸ್ಥಿತರಿದ್ದರು.