ಇಡ್ಕಿದು: ಗ್ರಾಮ ಪಂಚಾಯತ್ನ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷೆ ಮೋಹಿನಿ ಇವರ ಅಧ್ಯಕ್ಷತೆಯಲ್ಲಿ ಆ.30 ರಂದು ನಡೆಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಪ.ಜಾತಿ /ಪ.ಪಂಗಡದ ಫಲಾನುಭವಿಗಳು ಸೌಲಭ್ಯಗಾಗಿ ಅರ್ಜಿ ಸಲ್ಲಿಸಿದ್ದು ಎಲ್ಲಾ ಫಲಾನುಭವಿಗಳ ಸಭೆ ಕರೆದು ಅವಶ್ಯಕತೆಗನುಗುಣವಾಗಿ ಅನುದಾನ ಮಂಜೂರು ಮಾಡುವ ಬಗ್ಗೆ ನಿರ್ಣಯಿಸಲಾಯಿತು. ನಿವೇಶನ ಮಂಜೂರಾತಿಗೆ ಕೋರಿ ಈ ಹಿಂದೆ ಬಹಳಷ್ಟು ಅರ್ಜಿಗಳು ಬಂದಿದ್ದು , ಅವುಗಳಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಮಂಜೂರಾತಿ ಬಗ್ಗೆ ಕುಳ ಮತ್ತು ಇಡ್ಕಿದು ಗ್ರಾಮದಲ್ಲಿ ನಿವೇಶನ ಕಾದಿರಿಸುವಂತೆ ತಹಶೀಲ್ದಾರರಿಗೆ ಕೋರುವ ಬಗ್ಗೆ ನಿರ್ಣಯಿಸಲಾಯಿತು. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈಗಾಗಲೇ ಮಳೆಯ ಕೊರತೆಯಾಗಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ತೋರುವ ಸಾಧ್ಯತೆ ಇದ್ದು , ಆದ್ದರಿಂದ ಮಳೆ ನೀರು ಹರಿವು ಇರುವ ತೋಡುಗಳಿಗೆ ಮಣ್ಣಿನ ಒಡ್ಡುಗಳ ನಿರ್ಮಾಣ ಮಾಡುವುದು ಮತ್ತು ಹಲಗೆ ಇರುವ ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸುವ ಬಗ್ಗೆ ಚರ್ಚಿಸಲಾಯಿತು.
ಈ ಬಗ್ಗೆ ಇಡ್ಕಿದು ಸೇವಾ ಸಹಕಾರಿ ಸಂಘ, ಸ್ಥಳೀಯ ಯುವಕ ಮಂಡಲಗಳನ್ನು ಸೇರಿಸಿ ಸಭೆ ನಡೆದು ಕಾರ್ಯ ರೂಪಕ್ಕೆ ತರುವ ಬಗ್ಗೆ ನಿರ್ಣಯಿಸಲಾಯಿತು. ಜಲ್ ಜೀವನ್ ಮಿಷನ್ ಕಾಮಗಾರಿ ಕುಳ ಗ್ರಾಮದಲ್ಲಿ ಶೇ೮೦ರಷ್ಟು ಕಾರ್ಯಗತವಾಗಿದ್ದು ಇಡ್ಕಿದು ಗ್ರಾಮ ದಲ್ಲಿ ಪ್ರಗತಿಯಾಗಿರುವುದಿಲ್ಲ . ಗುತ್ತಿಗೆದಾರರಿಗೆ ಕರೆ ಮಾಡಿದಾಗ್ಯೂ ಯಾವುದೇ ರೀತಿಯಲ್ಲಿ ಪ್ರಗತಿಯಾಗಿರುವುದಿಲ್ಲ. ಈ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬಂಟ್ವಾಳ ಇವರಿಗೆ ಪತ್ರಿಸುವುದು ಮತ್ತು ಗುತ್ತಿಗೆದಾರರನ್ನು ಕಪ್ಪ ಪಟ್ಟಿಗೆ ಸೇರ್ಪಡೆ ಮಾಡಲು ಒತ್ತಾಯಿಸುವ ಬಗ್ಗೆ ನಿರ್ಣಯಿಸಲಾಯಿತು.
ಸರಕಾರಿ ಸಂಯುಕ್ತ ಫ್ರೌಢ ಶಾಲೆ ಸೂರ್ಯ ಇಡ್ಕಿದು ಇಲ್ಲಿ ಸುಮಾರು ೧೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಈಶ್ವರ ನಾಯ್ಕ ಸಹಶಿಕ್ಷಕರು ಕನ್ನಡ ಭಾಷೆ ಇವರು ತಮ್ಮ ಹುಟ್ಟೂರಾದ ಭಟ್ಕಳ ಇಲ್ಲಿಗೆ ವರ್ಗಾವಣೆಗೊಂಡಿರುತ್ತಾರೆ. ಇನ್ನೋರ್ವ ಸಹಶಿಕ್ಷಕ ಶಿವಕುಮಾರ ಹಿಚ್ಚದ್ ಒಬ್ಬ ಶಿಕ್ಷಕನಾಗಿ ಕಲಾವಿದನಾಗಿ, ಪತಿಕೋದ್ಯಮದ ಅನುಭವಿಯಾಗಿ, ಇಂಗ್ಲಿಷ್, ಹಿಂದಿ, ತುಳು, ಉರ್ದು, ಕೊಂಕಣಿ ಭಾಷೆಗಳಲ್ಲಿ ವ್ಯವಹರಿಸುವಷ್ಟು ಜ್ಞಾನಪಡೆದವರಾಗಿ ಕಳೆದ ೨೦ ವರ್ಷಗಳಿಂದ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಹಾಗೂ ಊರವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರನ್ನು ಇಡ್ಕಿದು ಗ್ರಾಮ ಪಂಚಾಯತ್ ವತಿಯಿಂದ ಪ್ರೀತಿ ಪೂರ್ವಕವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂ.ಉಪಾಧ್ಯಕ್ಷ ಪದ್ಮನಾಭ, ಪಂ.ಸದಸ್ಯರಾದ ಚಿದಾನಂದ.ಪಿ, ಎಂ.ಸುಧೀರ್ ಕುಮಾರ್ ಶೆಟ್ಟಿ , ರಮೇಶ ಪೂಜಾರಿ, ಸಂಜೀವ, ತಿಲಕ್ರಾಜ್ ಶೆಟ್ಟಿ, ಸಿದ್ದಿಕ್ ಆಲಿ, ಪುರುಷೋತ್ತಮ, ಶೋಭಾ, ಭಾಗೀರಥಿ, ಪುಷ್ಪಾ, ಜಯಂತಿ, ಪ್ರಶಾಂತ್, ಲಲಿತಾ, ಮೋಹಿನಿ, ಗೀತಾಂಜಲಿ, ಉಪಸ್ಥಿತರಿದ್ದರು. ಪಂ.ಸಿಬ್ಬಂದಿ ಪೂರ್ಣಿಮಾ, ಭವ್ಯ, ಸಾವಿತ್ರಿ, ಸುನೀತಾ, ಲೆಕ್ಕಸಹಾಯಕಿ ರಾಜೇಶ್ವರಿ ಕಲಾಪದಲ್ಲಿ ಸಹಕರಿಸಿದರು. ನಾಡಗೀತೆಯೊಂದಿಗೆ ಸಭೆಯನ್ನು ಪ್ರಾರಂಭಿಸಿ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಗೋಕುಲ್ದಾಸ್ ಭಕ್ತ ಸ್ವಾಗತಿಸಿ, ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯ ಮಾಡಲಾಯ್ತು.