


ತುಮಕೂರು : ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ತುಮಕೂರು ಜಿಲ್ಲಾ ಪೊಲೀಸರು ಭೇದಿಸಿದ್ದು, 6 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಗುಬ್ಬಿ ತಾಲೂಕಿನ ತಿಪ್ಪೂರಿನ ಟಿ.ಆರ್.ಮಧುಚಂದ್ರ (29), ಎಸ್.ಶಿವಕುಮಾರ್ (24), ಉದ್ದೆ ಹೊಸಕೆರೆಯ ಮಂಜುನಾಥ್ (39), ಹಂದನಕೆರೆಯ ತಿಮ್ಮರಾಜು (45) ಮತ್ತು ರವೀಶ್ (50), ತುಮಕೂರು ಪಟ್ಟಣದ ಇಮ್ರಾನ್ ಪಾಷಾ (40) ಎಂದು ಗುರುತಿಸಲಾಗಿದೆ.
ಆಗಸ್ಟ್ 12 ರಂದು ಗುಬ್ಬಿ ತಾಲೂಕಿನ ತಿಪೂರು ಗ್ರಾಮದ ಆರೋಪಿ ಮಧುಚಂದ್ರ ಎಂಬಾತ ಅಕ್ರಮವಾಗಿ, ಲೈಸನ್ಸ್ ಇಲ್ಲದೆ ನಾಡ ಬಂದೂಕಿನಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟಿಯಾಡುತ್ತಿದ್ದ. ಇದನ್ನು ಪ್ರಶ್ನಿಸಿದ ದರ್ಶನ್ ಎಂಬವರೊಂದಿಗೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಆಕಸ್ಮಿಕವಾಗಿ ಬಂದೂಕು ಕೆಳಗೆ ಬಿದ್ದಿದ್ದು, ಸ್ಥಳದಲ್ಲಿದ್ದ ಚೈತ್ರಾ ಎಂಬವರಿಗೆ ಗಾಯವಾಗಿತ್ತು. ಈ ಬಗ್ಗೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಹೊಂದಿದ್ದ ಲೈಸನ್ಸ್ ಇಲ್ಲದ ಬಂದೂಕಿನ ಬಗ್ಗೆ ತನಿಖೆಗಿಳಿದ ಪೊಲೀಸರ ಮುಂದೆ ಅಕ್ರಮ ಬಂದೂಕು ಮಾರಾಟ ಜಾಲದ ವಿಚಾರ ಬೆಳಕಿಗೆ ಬಂದಿದೆ. ನಾಡ ಬಂದೂಕುಗಳನ್ನು ತಯಾರಿಸಿ 25,000 ದಿಂದ 30,000 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿರುವ ಜಾಲ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣ ಪ್ರಕರಣದ ಬೆಂಬತ್ತಿದ ಪೊಲೀಸರು 6 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ನಾಲ್ಕು ಬಂದೂಕುಗಳ ಬಿಡಿ ಭಾಗಗಳನ್ನು,ಅದರ ತಯಾರಿಗೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಂದನಕೆರೆಯ ಪಾರ್ಮ್ಹೌಸ್ನಲ್ಲಿ ಗನ್ಗಳನ್ನು ಜೋಡಿಸಿ, ಅರಣ್ಯದಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಬಳಸುತ್ತಿದ್ದರು. ಇವರಿಂದ ನಾಡ ಬಂದೂಕುಗಳನ್ನು ಖರೀದಿ ಮಾಡಿದವರೂ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಉಪಯೋಗಿಸುತ್ತಿದ್ದಾರೆ. ಅಲ್ಲದೇ, ಅನೇಕರ ಬಳಿ ಅಕ್ರಮ ನಾಡ ಬಂದೂಕು ಇರುವ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದುಬಂದಿದ್ದು, ಅದನ್ನು ವಶಕ್ಕೆ ಪಡೆಯುವ ಕಾರ್ಯದಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.