ವಿಟ್ಲ: ಬಂಟ್ವಾಳ ತಾಲೂಕು ಪುಣಚ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈರಿಕಟ್ಟೆ ಕೊಡಂಚಡ್ಕ ಎಂಬ ಪ್ರದೇಶದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತ ಕಟ್ಟಡ ಕಟ್ಟಿ, ಅದರಲ್ಲಿ ಹೈನುಗಾರಿಕೆ ನೆಪದಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಕುತ್ತಿದ್ದು,ಇದೊಂದು ಅನಧಿಕೃತ ಉದ್ಯಮ ಆಗಿರುತ್ತದೆ.
ಪುಣಚಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಶುವೈದ್ಯ ಆಸ್ಪತ್ರೆಯಾಗಲೀ, ಪಶು ವೈದ್ಯರಾಗಲೀ ಇರುವುದಿಲ್ಲ.ಅನಧಿಕೃತ ಗೋಸಾಕಣಾ ಕೇಂದ್ರದಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೆ ಇದರ ದುರ್ಗಂಧವು ಪಸರಿಸುತ್ತಿರುವುದರ ಜೊತೆಗೆ ಕೊಳಚೆ ನೀರು ಸಮೀಪದ ನಿವಾಸಿಗಳ ಜಮೀನಿಗೆ ನುಗ್ಗುತ್ತಿರುವುದರಿಂದ ಈ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಶಾಲಾಮಕ್ಕಳು ಇದೇ ದಾರಿಯಿಂದ ನಡೆದುಕೊಂಡು ಹೋಗಲು ಅನಾನುಕೂಲಕರವಾಗಿದೆ.
ಈ ಉದ್ಯಮಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಉಲ್ಲಂಘಿಸಿ ಈ ಉದ್ದಿಮೆಯನ್ನು ನಡೆಸುತ್ತಿದ್ದಾರೆ. ಊರಿನ ಜನರಿಗೆ ಮಾರಕವಾಗಿರುವ ಅನಧಿಕೃತ ಹೈನುಗಾರಿಕೆಯನ್ನು ತಕ್ಷಣ ನಿಲ್ಲಿಸಬೇಕೆಂದು ಪರಿಸರ ಮಾಲಿನ್ಯ ಇಲಾಖೆ ಮಂಗಳೂರು ಇವರಿಗೆ ಸ್ಥಳೀಯ ನಿವಾಸಿ ಮೋಹನ ಭಂಡಾರಿ ಮನವಿ ಮಾಡಿದ್ದಾರೆ.