ಇಂದು ದೇಶಾದ್ಯಂತ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಆದರೆ ಕೊರೊನಾ ಸೋಂಕಿನ ಆತಂಕದ ನಡುವೆ ಸ್ವಾತಂತ್ರ್ಯೋತ್ಸವ ಉತ್ಸಾಹ ಅಲ್ಪಮಟ್ಟಿಗೆ ಕಡಿಮೆಯಾಗಿದೆ. ಕೊರೊನಾ ಮಧ್ಯೆಯೇ ದೇಶಾದ್ಯಂತ ಹಲವು ಕಾರ್ಯಕ್ರಮಗಳು ಜರುಗಲಿವೆ. ಜೊತೆಗೆ ಸ್ವಾತ್ಯಂತ್ಯ ದಿನಾಚರಣೆಯ ದಿನವಾದ ಇಂದು ಹಲವು ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನೂ ಕೈಗೊಳ್ಳಲಾಗಿದೆ.
ಆಗಸ್ಟ್ 15, 1947ರಲ್ಲಿ ಭಾರತ ಸ್ವಾತಂತ್ರ್ಯವನ್ನ ಕಂಡ ದಿನ. ಬ್ರಿಟೀಷರ ಆಳ್ವಿಕೆ, ದಬ್ಬಾಳಿಕೆಯಿಂದ ಮುಕ್ತವಾದ ದಿನ. ಹೀಗಾಗಿ ಇದು ಇಡೀ ಭಾರತೀಯರಿಗೆ ವಿಶೇಷವಾದ ದಿನ.
ಕಳೆದ ವರ್ಷದಂತೆ ಈ ಬಾರಿಯೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಈ ಹಿನ್ನೆಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಸ್ವಾತಂತ್ರ್ಯ ದಿನವನ್ನು ಕೊರೊನಾ ನಿಯಮಗಳನ್ನು ಪಾಲಿಸಿಯೇ ಆಚರಿಸಲಾಗಿತ್ತು. ದೆಹಲಿಯ ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಬೆಳಗ್ಗೆ 7.30ಕ್ಕೆ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದೇ ಭಯೋತ್ಪಾದಕ ದಾಳಿಯ ಎಚ್ಚರಿಕೆಯನ್ನು ಗುಪ್ತಚರ ಸಂಸ್ಥೆಗಳು ನೀಡಿವೆ. ರಾಷ್ಟ್ರ ರಾಜಧಾನಿ ಸೇರಿದಂತೆ ಇತರ ರಾಜ್ಯಗಳಿಗೆ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ.
ದೇಶದೆಲ್ಲೆಡೆ ಅಲರ್ಟ್
ದೆಹಲಿ ಪೊಲೀಸ್ ಇಲಾಖೆ, ಜಿಆರ್ಪಿ, ಸ್ಥಳೀಯ ಪೊಲೀಸ್, ರಾಜ್ಯಗಳ ಗುಪ್ತಚರ ಸಂಸ್ಥೆಗಳಿಗೆ ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಜೈಶ್ ಮತ್ತು ಲಷ್ಕರ್ ಉಗ್ರ ಸಂಘಟನೆಯಿಂದ ದಾಳಿ ಸಂಭವವಿದ್ದು, ಅಲರ್ಟ್ ಆಗಿರುವಂತೆ ಸೂಚಿಸಿದೆ. ಪ್ರಮುಖ ಭದ್ರತಾ ಪಡೆಗಳು, ಸೇನೆಯ ಫಾರ್ವರ್ಡ್ ಪೋಸ್ಟ್ಗಳು, ಯೋಧರ ಗುರಿಯಾಗಿಸಿ ಭಯೋತ್ಪಾದಕರ ದಾಳಿ ನಡೆಯುವ ಎಚ್ಚರಿಕೆ ನೀಡಿದೆ. ಅತ್ಯಾಧುನಿಕ ಐಇಡಿಗಳನ್ನು ಬಳಸಿ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ದೆಹಲಿಯ ಕೆಂಪು ಕೋಟೆಯಲ್ಲಿ ಬಹು-ಹಂತದ ಭದ್ರತೆ ನೀಡಲಾಗಿದ್ದು, ಎನ್ಎಸ್ಜಿ ಸ್ನೈಪರ್ಗಳು, ಎಸ್ಡಬ್ಲ್ಯೂಎಟಿ ಕಮಾಂಡೋಗಳನ್ನ ನಿಯೋಜನೆ ಮಾಡಲಾಗಿದೆ.
ಒಟ್ಟಾರೆ, ದೇಶದಲ್ಲಿ ಕೊರೊನಾ ಸೋಂಕಿನ ಮಧ್ಯೆಯೇ ಸ್ವಾತಂತ್ರ್ಯದ ಭಾವುಟ ರಾರಾಜಿಸಲಿದೆ. ಭಾರತಾಂಬೆಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಸ್ಮರಣೆಯಾಗಲಿದೆ.