ಆ ದಿನ ಬೆಳಿಗ್ಗೆ ಕಾಲೇಜ್ ಒಂದರ ಫೆಸ್ಟ್ಗೆ ಹೊರಡುವ ಸಿದ್ಧತೆ ನಡೆಯುತ್ತಿತ್ತು.ಫೆಸ್ಟ್ ಇದೆ ಎಂದು ತಿಳಿದದ್ದೇ ತಡ ಎರಡು ವಾರಗಳ ಮುಂಚೆಯೇ ತರಗತಿಯಲ್ಲಿ ಅದರದ್ದೇ ಮಾತುಕತೆ ನಡೆಯಲಾರಂಭವಾಗಿತ್ತು.ಯಾರು ಯಾವ ಸ್ಪರ್ಧಗೆ ಭಾಗವಹಿಸುವುದು,ಎಷ್ಟು ಪ್ರವೇಶಶುಲ್ಕ ಸ್ಪರ್ಧೆಯ ನಿಯಮಗಳೇನು ಎಂದು ಎಲ್ಲಾ ಕರೆಮಾಡಿ ತಿಳಿದುಕೊಂಡು ಇದ್ದ ಹಣವನ್ನು ಸೇರಿಸಿ ಪ್ರವೇಶ ಶುಲ್ಕವನ್ನು ಮಾಡಿ ಹೊರಡಲು ಎಲ್ಲರೂ ಸಿದ್ದರಾದರು.ನನ್ನೊಂದಿಗೆ ರಸಪ್ರಶ್ನೆಗೆ ಬರುತ್ತೇನೆ ಎಂದಿದ್ದ ನನ್ನ ಗೆಳೆಯ ಸ್ಪರ್ಧೆ ಇರುವ ಹಿಂದಿನ ದಿನ ನಾವು ಹೋಗುವುದು ಬೇಡ, ಸುಮ್ಮನೆ ಹಣ ವ್ಯರ್ಥ ಎನ್ನುವ ಮಾತುಗಳನ್ನಾಡಲು ಶುರು ಮಾಡಿದ್ದ. ಕೊನೆಗೂ ಅವನಿಗೆ ಐಸ್ ಕ್ರೀಮ್, ಜ್ಯೂಸ್ ಕುಡಿಸಿ ಅವನು ಅಲ್ಲಿಗೆ ಬರಲು ಮನಸ್ಸು ಬರುವಂತೆ ಮಾಡಿದೆ. ಇನ್ನು ಆ ದಿನದ ರಾತ್ರಿಯ ಚರ್ಚೆ ಇನ್ನೂ ಒಳ್ಳೆಯದಾಗಿತ್ತು. ಹೋಗುವವರೆಲ್ಲರಿಗೂ ಎಲ್ಲಿ ಕಾಲೇಜ್, ಹೇಗೆ ಹೋಗುವುದು ಎನ್ನುವ ಸ್ಪಷ್ಟವಾದ ಮಾಹಿತಿ ಇರಲಿಲ್ಲ. ಕೊನೆಗೆ ಎಲ್ಲರೂ ಒಟ್ಟಿಗೆ ಸೇರಿ ಹೋಗೋಣ ಎಂದು ನಿರ್ಧರಿಸಿಕೊಂಡು ನಿದ್ರೆಗೆ ಜಾರಿದೆವು.
ಹುಡುಕಾಟದಲ್ಲಿ ಮಜಾವಿದೆ ಎನ್ನುವ ಶೀರ್ಷಿಕೆಯನ್ನಿಟ್ಟು ಇವನು ಏನು ಬರೆತ್ತಿದ್ದಾನೆ ಅಂತ ಅನ್ಕೋಬೇಡಿ. ನಿಜವಾದ ಕಥೆ ಆರಂಭವಾಗುವುದು ಇನ್ನು ಮುಂದೆ.
ಇಷ್ಟು ಬೇಗ ಯಾಕೆ ಏಳ್ತೀಯಾ, ಇಷ್ಟು ಬೇಗ ಹೊರಡ್ಬೇಕಾ ಅಲ್ಲಿಗೆ ಹೋಗ್ಲಿಕ್ಕೆ ಎನ್ನುವ ಮಾತುಗಳನ್ನು ಅಮ್ಮ ಆಡಿದ್ದರೂ ಸಹ ಅಮ್ಮನಿಗೆ ತಡವಾಗಬಹುದು ಅಂತ ಹೇಳಿ ಸಮಾಧಾನ ಮಾಡಿ ವಿಟ್ಲಕ್ಕೆ 6:30ಕ್ಕೆ ತಲುಪಿದ್ದೆ. ನನ್ನ ಗೆಳೆಯ ಬೇಗ ಬರುತ್ತೇನೆ ಅಂದಿದ್ದವ 6:50 ಆಗುವಾಗ ಬಂದು ತಲುಪಿದಾಗ ಅಬ್ಬ ಇವನು ಕೈ ಕೊಡದೆ ಬಂದುಬಿಟ್ಟ ಎಂಬ ಧೈರ್ಯ, ಸಮಾಧಾನ ಮನದಲ್ಲಿ ಮೂಡಿತ್ತು. ಅವನ ಮಾತು ಕೇಳಿ ಬಸ್ ಪಾಸ್ ವ್ಯರ್ಥವಾಗಬಾರದು ಅಂತ ಹೇಳಿ Government ಬಸ್ ಗೆ ಕಾದೆವು. ಅದು ಎಷ್ಟು ಕಾದರೂ ಬರಲೇ ಇಲ್ಲ. ಇನ್ನು ನಾವು ಹೋಗುವ ಅಂತ ಹೇಳುತ್ತ ಅವನಿಗೆ ಸ್ವಲ್ಪ ಬೈದು ಬಸ್ ಗೆ ಹತ್ತುವಾಗಲೇ ಹಿಂದಿನಿಂದ ಪ್ರೈವೇಟ್ ಬಸ್ ಬಂದಿತ್ತು. ನಂತರ ಅವಸರದಿಂದ ಹತ್ತಿದ್ದ ನಾವು ಮತ್ತೆ ಇಳಿದು ಬಂದಿದ್ದ ಬಸ್ಸಿಗೆ ಹತ್ತಿದೆವು. ಕೊನೆಗೂ 7:30ಕ್ಕೆ ಕಲ್ಲಡ್ಕಕ್ಕೆ ತಲುಪಿದೆವು.
ಅಲ್ಲಿಗೆ ತಲುಪಿದ ಮೇಲೆ ಮತ್ತೆ ಕಾಯುವ ಕೆಲಸ. ನಮಿಗೆ 9:30ಕ್ಕೆ ಅಲ್ಲಿಗೆ ತಲುಪಬೇಕಿತ್ತು. ಆ ಹೊತ್ತಲ್ಲಿ ನಮಿಗೆ ರಸಪ್ರಶ್ನೆ ಸ್ಪರ್ಧೆಯಿತ್ತು. ಉಳಿದವರಿಗೆ ಬೇರೆಬೇರೆ ಸಮಯಗಳಲ್ಲಿ ಸ್ಪರ್ಧೆ ನಿಗದಿಯಾಗಿತ್ತು. ಅವರು ಒಬ್ಬೊಬ್ಬರಾಗಿ ಬರುವವರೆಗೆ ಕಾದಾಗಲೇ 8:10ಆಗಿತ್ತು. ಇನ್ನು ಇವರನ್ನು ಕಾದರೆ ಆಗ್ಲಿಕಿಲ್ಲ ಎಂದುಕೊಂಡು ಧೈರ್ಯಮಾಡಿ ಗೆಳೆಯನು ನನಗೆ ದಾರಿ ಗೊತ್ತು ಎಂದಾಗ ಒಮ್ಮೆಲೆ ಹೋಗಿ ಬಸ್ಸಿಗೆ ಹತ್ತಿ ಬಿಟ್ಟಿವು.
ಬಿ. ಸಿ. ರೋಡ್ ತಲುಪುವುದರೊಳಗೆಯೇ ನಮ್ಮ ಮೊಬೈಲ್ ಗಳಲ್ಲಿ Google Map ನೋಡಲು ಆರಂಭವಾಗಿತ್ತು. ದೇವರೇ ನಮ್ಮನೊಮ್ಮೆ ಅಲ್ಲಿಗೆ ಬೇಗ ತಲುಪಿಸಿಬಿಡು ಎನ್ನುವ ಪ್ರಾರ್ಥನೆ ಮನದಲ್ಲಿ ಸದಾ ಇತ್ತು.ಅಷ್ಟೋತ್ತರಲ್ಲಿ ಕೆಲವು ಗೆಳತಿಯರು ನೀವು ಕಂಕನಾಡಿಯಲ್ಲಿ ಇಳಿಯಿರಿ. ನಾವು ಅಲ್ಲಿ ಇರುತ್ತೇವೆ ಎಂದು ಕರೆ ಮಾಡಿ ತಿಳಿಸಿದರು. ಸ್ವಲ್ಪ ದೈರ್ಯ ಮಾತುಗಳಿಂದ ನಮಗೆ ಬಂದಿತ್ತು. ಕೊನೆಗೂ ಕಂಕನಾಡಿ ಹತ್ತಿರಕ್ಕೆ ಬಂದಾಗ ನಾವು ಸರ್ಕಲಲ್ಲಿ ಇದ್ದೇವೆ ಎಂದು ಅವರು ತಿಳಿಸಿದ್ದರು. ಆದರೆ ನಮಿಗೆ ಮತ್ತೆ ತಿಳಿದದ್ದು ಕಂಕನಾಡಿಯಲ್ಲಿ ಎರಡು ಸರ್ಕಲ್ ಇದೆಯೆಂದು.
ಒಬ್ಬರು ಹಿರಿಯರ ಮಾತು ಕೇಳಿ ನಾವು ಇಳಿಯಬೇಕು ಎಂದುಕೊಂಡಿದ್ದ ಸರ್ಕಲ್ ಬಿಟ್ಟು ಇನ್ನೊಂದು ಸರ್ಕಲ್ ಅಲ್ಲಿ ಇಳಿದೆವು. ಮತ್ತೆ ಹುಡುಕಾಟ ಆರಂಭವಾಗಿತ್ತು. ಗೆಳತಿಯರಿಗೆ ಕರೆ ಮಾಡಿದಾಗ ನಾವು ಆ ಸ್ಥಳದಲ್ಲಿ ಇದ್ದೇವೆ ನೀವು ಬನ್ನಿ ಎಂದಾಗ ನಾವು ಹೊರಡುವ ಎಂದು ಗೆಳೆಯನಿಗೆ ಹೇಳಿದೆ. ಅಲ್ಲಿಯತನಕ ನನಗೆ ದಾರಿ ಗೊತ್ತು ಎಂದು ಧೈರ್ಯದ ಮಾತುಗಳನ್ನು ಆಡುತ್ತಿದ್ದವ ಒಮ್ಮೆಲೆ ನನಗೆ ಗೊತ್ತಿಲ್ಲ ಎಂದುಬಿಟ್ಟ. ಇವನ ಮಾತುಗಳನ್ನು ಕೇಳಿ ಧೈರ್ಯದಿಂದ ಬಂದಿದ್ದ ನನಗೆ ಯಾಕಾದರೂ ಇವನ ಮಾತು ಕೇಳಿಬಿಟ್ಟೇನೋ ಎಂದು ಒಮ್ಮೆ ಅನಿಸಿಬಿಡ್ತು. ಕೊನೆಗೂ ಒಬ್ಬೊಬ್ಬರಲ್ಲಿ ಕೇಳಿಕೊಂಡು ಕೊನೆಗೂ ಅವರಿರುವ ಜಾಗವನ್ನು ಹುಡುಕಿ ಅವರೊಂದಿಗೆ ಕಾಲೇಜಿಗೆ ತಲುಪಿದೆವು.6 ಗಂಟೆಗೆ ಮನೆಯಿಂದ ಹೊರಟಿದ್ದ ನಾನು ಕೊನೆಗೂ 9:45ಕ್ಕೆ ತಲುಪಿದ್ದೆ. ಅಮ್ಮ ಹೇಳಿದ ಮಾತನ್ನು ಕೇಳದೆ ಹೊರಟಿದ್ದ ನನಿಗೆ ಎಲ್ಲರನ್ನು ಕಾಯುವುದು, ಹುಡುಕುವುದು ಒಂದು ಕೆಲಸವಾಗಿ ಹೋಗಿತ್ತು.
ಕಾಲೇಜ್ ತಲುಪಿದ್ದೆ ತಡ ನಿಮ್ಮ ಸ್ಪರ್ಧೆ ಆರಂಭವಾಗುವ ಸಮಯ ಕಳೆದಿದೆ ಎಂದು ತಿಳಿದು ಅತ್ತಿಂದಿತ್ತ ನೋಡದೆ ಸ್ಪರ್ಧೆಯ ಕೊನೆಗೆ ತೆರಳಿದೆವು. ಸುಮಾರು 4 ಗಂಟೆ ಹೊತ್ತು ತಿರುಗಾಟ ಮಾಡಿ ಬಂದವನಿಗೆ 20 ನಿಮಿಷದಲ್ಲಿ ಸ್ಪರ್ಧೆ ಮುಗಿದುಹೋಗಿತ್ತು.
‘ನನ್ನದು ಅರ್ಧಕಥೆ ‘ಮಾತ್ರ ಇಲ್ಲಿಗೆ ಮುಗಿದದ್ದು ಸ್ವಲ್ಪ ಆರಾಮದಲ್ಲಿ ಮುಂದೆ ಓದಿ.
ಗೆಳೆಯ ಹಿಂದಿನ ಅಲ್ಲಿಗೆ ಹೋಗುವುದೇ ಬೇಡ ಅನ್ನುತ್ತಿದ್ದವ ಅಲ್ಲಿ ನಾನು ಲೂಡೋ ಸ್ಪರ್ಧೆಗೂ ಸೇರಬೇಕು ಅಂತ ಹೇಳಿ ಸೇರುತ್ತಾನೆ. ನಾನು ನೃತ್ಯ ಸ್ಪರ್ಧೆ ಆಗುತ್ತಿರುವ ಅಲ್ಲಿಗೆ ಹೋಗಿ ಅದನ್ನು ನೋಡುತ್ತಾ ಕುಳಿತೆ. ನಂತರ ಸಮಯ ಹೋಗಿದ್ದೇ ತಿಳಿಯಲಿಲ್ಲ. ಊಟವಾದರೂ ಚೆನ್ನಾಗಿ ಮಾಡಬೇಕು, ನಾವು ಹಾಕಿದ ಹಣ ವ್ಯರ್ಥವಾಗಬಾರದು ಎಂದುಕೊಂಡು ಹೋಗಿದ್ದ ನಮಿಗೆ ಮತ್ತೆ ತಿಳಿದದ್ದು ಅಲ್ಲಿ ಊಟಕ್ಕೆ ಹಣ ಕಟ್ಟಬೇಕು, ಅದು ಕೂಡ ಒಂದು ಊಟಕ್ಕೆ 80ರೂ. ಅಂತ.ಹಸಿವಲ್ಲಿ ಅತ್ತಿಂದಿತ್ತ ಓಡಾಟ ಮಾಡಿ ನಂತರ ನೃತ್ಯ ಸ್ಪರ್ಧೆಯಲ್ಲಿದ್ದ ನಮ್ಮ ಗೆಳತಿಯ ನೃತ್ಯವನ್ನು ನೋಡಿ 3:30 ಆಗುವಾಗ ಕ್ಯಾಂಟೀನ್ನಲ್ಲಿ ಒಂದು ಪಪ್ಸ್, ಐಸ್ಕ್ರೀಂ ತಿಂದು ಮನೆಗೆ ಹೊರಡುವ ನಿರ್ಧರಿಸಿಕೊಂಡು ಹೊರಗೆ ಬರುವಾಗ ನಮ್ಮೊಂದಿಗಿದ್ದ ಕೆಲವು ಗೆಳೆಯರು Tressure Hunt ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಆ ಸ್ಪರ್ಧೆಯಲ್ಲಿ ಅವರಿಗೆ ಅನೇಕ ಸವಾಲುಗಳನ್ನು ನೀಡಿದ್ದರು. ಅದನ್ನೆಲ್ಲ ಎದುರಿಸಿ ಕೊನೆಯ ಸುತ್ತಿನಲ್ಲಿ ಅವರಿದ್ದರು. ಅವರೊಂದಿಗೆ ಸೇರಿ ಅವರಿಗೆ ಸಹಾಯ ಮಾಡೋಣ ಎಂದು ನಿರ್ಧರಿಸಿ, ಅವರೊಂದಿಗೆ ಕಾಲೇಜ್ ಪೂರ್ತಿ ಸುತ್ತಲೂ, ಹುಡುಕಲು ಆರಂಭಿಸಿದೆವು. ಒಂದು ರೀತಿಯಲ್ಲಿ ಅದು ನಮ್ಮ ಕಾಲೇಜ್ ಅಂತಲೇ ನಮಗೆ ಭಾಸವಾಗುತ್ತ ಸಾಗಿತ್ತು.
ಮುಂದಕ್ಕೆBasketball Court ನಲ್ಲಿ ಒಂದು ಸುಳಿವು ಇದೆ ಎಂದು ತಿಳಿದಾಗ ಅದನ್ನು ಹುಡುಕಲು ಪ್ರಾರಂಭಿಸಿದೆವು. ಆರರಿಂದ ಏನು ಜನ ಎಷ್ಟು ಹುಡುಕಿದರೂ ಅದು ನಮ್ಮ ಕಣ್ಣಿಗೆ ಕಾಣಲಿಲ್ಲ. ಒಂದು ಕಡೆ ಆಯಾಸ, ಇನ್ನೊಂದು ಕಡೆ ಊಟವೂ ಆಗಿರಲಿಲ್ಲ. ಕೊನೆಗೆ ಒಂದು ಪ್ರಯತ್ನ ಅಂತ ಹೇಳಿ basketball stand ನ ಮೇಲ್ಗಡೆ ನೋಡೋಣ ಅಂದಾಗ ಅಷ್ಟು ಎತ್ತರಕ್ಕೆ ಯಾರ ಕೈ ಕೂಡ ತಲುಪುತ್ತಿರಲಿಲ್ಲ. ಆ ಸಮಯದಲ್ಲಿ ಮತ್ತೆ ಸಹಾಯಕ್ಕೆ ಬಂದದ್ದು ನನ್ನೊಂದಿಗೆ ಬಂದಿದ್ದ ಸ್ನೇಹಿತ. ಅವನು ಉದ್ದವಾಗಿ ಇದ್ದದ್ದು ಇದಕ್ಕೊಂದು ಬಹಳ ಉಪಯೋಗವಾಯಿತು. ಅವನೇ ತುಂಬಾ ಉದ್ದವಿದ್ದರೂ ಅವನಿಗೆ ಸಹಾಯಕ್ಕಾಗಿ ಒಂದು ಕುರ್ಚಿ ಅದರ ಮೇಲೊಂದು ಕಲ್ಲು ಕೂಡ ಬೇಕಾಯಿತು. ಅದನ್ನೆಲ್ಲ ತಂದಿಟ್ಟು ಕೊನೆಗೆ ಒಂದು ಸುಳಿವು ಸಿಕ್ಕಿದಾಗ ಆದ ಖುಷಿಗಂತೂ ಪಾರವೇ ಇರಲಿಲ್ಲ. ಸಿಕ್ಕಿದ್ದನ್ನು ಹಿಡಿದುಕೊಂಡು ಸ್ಪರ್ಧೆಯಲ್ಲಿದ್ದ ಗೆಳೆಯರಿಗೆ ಕೊಡೋಣವೆಂದು ಓಡುವಾಗ ಹುಡುಗರು ಸಿನಿಮಾದಲ್ಲಿ ಮದುವೆ ಮಾಡಲು ಓಡುವ ರೀತಿಯಲ್ಲಿ ಎದುರಿಗೆ ಏನೇ ಅಡ್ಡ ಸಿಕ್ಕಿದ್ದರು ಅದರ ಮೇಲೆಲ್ಲಾ ಹಾರಿಕೊಂಡು ಹೋದಾಗ ಆದ ಖುಷಿಯಂತೂ ಹೇಳಲಾಗದ ರೀತಿಯ ಸಂತೋಷ. ತದನಂತರವು ಅನೇಕ ಸವಾಲುಗಳು ನಮ್ಮ ಮುಂದಿತ್ತು.ಆ ಕಾಲೇಜ್ ನಮ್ಮದೇ ಎನ್ನುವ ರೀತಿಯಲ್ಲಿ ಹುಡುಕುತ್ತ ಓಡಾಡುತಿದ್ದೆವು . ಈ ಸಮಯದಲ್ಲಿ ನಮ್ಮ ತಂಡಕ್ಕೆ ಎರಡನೇ ಸ್ಥಾನ ಎಂದು ಘೋಷಣೆಯಾಯಿತು. ಮೊದಲ ಸ್ಥಾನ ಸಿಗದಿದ್ದರೂ ನಲ್ಲಿ ಕಂಡುಬಂದ ನಮ್ಮ ಒಗ್ಗಟ್ಟು ಏನೋ ಒಂದು ಖುಷಿ ನೀಡಿತ್ತು. ಮಧ್ಯಾಹ್ನದವರೆಗೆ ಎಲ್ಲೆಲ್ಲೋ ಇದ್ದ ನಾವು ಕೊನೆಗೆ ಒಟ್ಟಿಗೆ ಆಡಿದ್ದು ಎಲ್ಲಿಲ್ಲದ ಸಂತೋಷವನ್ನು ನೀಡಿತ್ತು. ಅದಕ್ಕಾಗಿ ನಾನು ಹೇಳಿದ್ದು ‘ ಹುಡುಕಾಟದಲ್ಲೂ ಮಜಾವಿದೆ ‘ಎಂದು.
?️ ಜೈದೀಪ್ ಅಮೈ….