ಮಂಗಳೂರು:ಕಳೆದ ವರ್ಷ ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಸಮಾಜದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಶೇಕಡಾ ಹತ್ತು ಮೀಸಲಾತಿಯನ್ನು ಜಾರಿಗೊಳಿಸಿತ್ತು. ಕೇಂದ್ರ ಸರಕಾರದ ಈ ನಿರ್ದೇಶನವನ್ನು ದೇಶದ ಎಲ್ಲಾ ರಾಜ್ಯ ಸರಕಾರಗಳು ಕೂಡ ಅನುಷ್ಟಾನಕ್ಕೆ ತಂದಿವೆ.
ಆದರೆ ಮೇಲ್ವರ್ಗದ ಸಮಾಜವಾದ ಪ್ರತಿಷ್ಟಿತ ಜಿ.ಎಸ್.ಬಿ. ಸಮಾಜದ ಹಾಗೂ ಇತರ ಕೆಲವು ಸಮಾಜದ ಹೆಸರುಗಳನ್ನು ಯಾದಿಯಲ್ಲಿ ಸೇರಿಸದೆ ಇರುವುದರಿಂದ ಗೌಡ ಸಾರಸ್ವತ ಬ್ರಾಹ್ಮಣ ಹಾಗೂ ಇತರ ಸಮಾಜದ ಹಲವಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಮೀಸಲಾತಿಯ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ಸಂವಿಧಾನದ ಈ ಸೌಲಭ್ಯದಿಂದ ಜಿ.ಎಸ್. ಬಿ. ಸಮಾಜದ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡ ಬಾರದೆಂದು ವಿಧಾನಸಭಾ ಅಧಿವೇಶನದಲ್ಲಿ ಮ೦ಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ್ ಕಾಮತ್ ಅವರು ಕೇಳಿರುವ ಗಮನ ಸೆಳೆಯುವ ಪ್ರಶ್ನೆಗೆ ಸರಕಾರವು ಸಕಾರಾತ್ಮಕವಾಗಿ ಸ್ಪಂದಿಸಿದ್ದು,
ಅಧಿವೇಶನ ಮುಗಿಯುವುದರೊಳಗೆ ಸದ್ಯವೇ ಈ ಬಗ್ಗೆ ಸರಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಗೃಹ ಸಚಿವ ಶ್ರೀ ಬಸವರಾಜ ಬೊಮ್ಮಾಯಿಯವರು ಸದನಕ್ಕೆ ಆಶ್ವಾಸನೆ ನೀಡಿದರು. ಈ ವಿಚಾರದಲ್ಲಿ ಶ್ರೀ ಡಿ ವೇದವ್ಯಾಸ್ ಕಾಮತ್ ಅವರೊಂದಿಗೆ ಕಾರ್ಕಳ ಶಾಸಕರಾದ ಶ್ರೀ ಸುನಿಲ್ ಕುಮಾರ್ ಅವರು ಧ್ವನಿಗೂಡಿಸಿದರು.