ಚತ್ತಿಸ್ ಗಢ: ಕಬಡ್ಡಿ ಪಂದ್ಯಾಟವಾಡುತ್ತಿರುವಾಗಲೇ 20 ವರ್ಷದ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಧಾಮ್ ತಾರಿ ಜಿಲ್ಲೆಯ ಗೋಜಿ ಎಂಬ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಕೋಕಾಡಿ ಗ್ರಾಮದ ನರೇಂದ್ರ ಸಾಹು ಎಂದು ಗುರುತಿಸಲಾಗಿದೆ. ಕಬಡ್ಡಿ ಪಂದ್ಯದ ವೇಳೆ ಯುವಕ ಅಸುನೀಗಿದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಧಾಮ್ ತಾರಿ ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯವೊಂದನ್ನು ಏರ್ಪಡಿಸಲಾಗಿತ್ತು. ಈ ವೇಳೆ ರೈಡರ್ ಆಗಿ ಎದುರಾಳಿಗಳ ಕೋರ್ಟ್ ಗೆ ಕಾಲಿರಿಸಿದ್ದ ನರೇಂದ್ರ ಸಾಹುವನ್ನು ಕೆಲವೇ ಕ್ಷಣಗಳಲ್ಲಿ ಟ್ಯಾಕಲ್ ಮಾಡಲಾಗಿತ್ತು, ಸಾಹು ಮುಗ್ಗರಿಸಿ ಬಿದ್ದಿದ್ದು, ಏದುರಾಳಿ ಆಟಗಾರರು ಕೂಡ ಆತನ ಮೇಲೆರಗಿದ್ದರು. ಈ ವೇಳೆ ಪ್ರಜ್ಞೆ ಕಳೆದುಕೊಂಡ ಸಾಹುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೇ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ.
ಪ್ರಾಥಮಿಕ ತನಿಖೆಯ ಪ್ರಕಾರ ನರೇಂದ್ರ ಸಾಹು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದ್ದು, ಅದಾಗ್ಯೂ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.