


ನವದೆಹಲಿ: ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ಮುಕ್ತಾಯಗೊಂಡ ಹಿನ್ನೆಲೆ ನವದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಿದೆ.
ಕೇಂದ್ರ ಸರ್ಕಾರ ಮೂರು ಬೇಡಿಕೆಗಳಿಗೆ ಒಪ್ಪಿದ ಹಿನ್ನೆಲೆ ಸಿಜಿಪಿ ಪ್ರತಿಭಟನೆಯನ್ನು ಅಂತ್ಯಗೊಳಿಸಿದ್ದು, ಶನಿವಾರ(ಜು.25) ಸಂಜೆ ವೇಳೆಗೆ ಪ್ರತಿಭಟನಾಕಾರರು ಸ್ಥಳ ಖಾಲಿ ಮಾಡುತ್ತಿದ್ದಂತೆ ಜಂತರ್ ಮಂತರ್ನಲ್ಲಿ ಎನ್ಡಿಎಂಸಿ ಸ್ವಚ್ಛತಾ ಕಾರ್ಯ ಕೈಗೊಂಡಿದೆ. ತ್ಯಾಜ್ಯ, ಭಗ್ನಗೊಂಡ ಅವಶೇಷಗಳು ಹಾಗೂ ತಾತ್ಕಾಲಿಕ ಡೇರೆ ವ್ಯವಸ್ಥೆ, ಆಹಾರ ಸಾಮಗ್ರಿಗಳಿಂದ ಸಂಗ್ರಹಿತವಾದ ತ್ಯಾಜ್ಯ ಸೇರಿದಂತೆ ಎಲ್ಲಾ ತ್ಯಾಜ್ಯಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.
ಜಂತರ್ ಮಂತರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಂದಿನಂತೆ ಸ್ವಚ್ಛತೆ ಕಾಯ್ದುಕೊಳ್ಳಲು 500 ಕ್ಕೂ ಹೆಚ್ಚು ಕಾರ್ಮಿಕರನ್ನ ಬಹು ಪಾಳಿಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಪ್ರತಿಭಟನಾ ಸ್ಥಳದಲ್ಲಿ ಉಳಿದಿರುವ ಕಸ, ನಿರ್ಮಾಣ ಅವಶೇಷಗಳು, ಬ್ಯಾನರ್ಗಳು, ಡೇರೆಗಳು ಮತ್ತು ಇತರ ವಸ್ತುಗಳನ್ನ ತೆರವುಗಳಿಸಲಾಗುತ್ತಿದೆ.
24 ಗಂಟೆಗಳಲ್ಲಿ ಸ್ಥಳವನ್ನ ಸಂಪೂರ್ಣ ಸ್ವಚ್ಛಗೊಳಿಸಿ, ಮೂಲ ಸ್ಥಿತಿಗೆ ತರುವುದು ಉದ್ದೇಶವಾಗಿದೆ. ಅದಕ್ಕಾಗಿ, ಟ್ರಕ್ಗಳು, ಆಟೋ-ಟಿಪ್ಪರ್ಗಳು ಮತ್ತು ಗಾಬ್ಲರ್ ಯಂತ್ರಗಳು ಸೇರಿದಂತೆ ಯಂತ್ರೋಪಕರಣಗಳನ್ನ ಸ್ಚಚ್ಛತಾ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಎನ್.ಡಿ.ಎಂ.ಸಿ ಅಧಿಕಾರಿಗಳು ತಿಳಿಸಿದ್ದಾರೆ..
ಜಂತರ್ ಮಂತರ್ ರಸ್ತೆ, ಟಾಲ್ಸ್ಟಾಯ್ ಮಾರ್ಗ, ಜೈ ಸಿಂಗ್ ರಸ್ತೆ, ಸಂಸದ್ ಮಾರ್ಗ ಮತ್ತು ಕನ್ನಾಟ್ ಪ್ಲೇಸ್ನ ಕೆಲವು ಭಾಗಗಳಲ್ಲಿ ಸ್ವಚ್ಛತೆ ನಡೆಸಲಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಪ್ರತಿಭಟನಾ ಸ್ಥಳ ಮತ್ತು ಹತ್ತಿರದ ಪ್ರದೇಶಗಳಿಂದ ಹತ್ತಾರು ಟನ್ ಮಿಶ್ರ ತ್ಯಾಜ್ಯವನ್ನ ಈಗಾಗಲೇ ತೆರವುಗೊಳಿಸಲಾಗಿದೆ ಎಂದು ಎನ್.ಡಿ.ಎಂ.ಸಿ ಹೇಳಿರುವುವದಾಗಿ ಮೂಲಗಳಿಂದ ತಿಳಿದುಬಂದಿದೆ.








