ಕಡಬ: ತಾಲೂಕಿನ ಪೆರಾಬೆ ಗ್ರಾಮದ ಅನ್ನಡ್ಕದ ಹಳ್ಳದಲ್ಲಿ ತಲೆಬುರುಡೆ ಮತ್ತು ಅಸ್ತಿಪಂಜರ ಪತ್ತೆಯಾದ ಬೆನ್ನಲ್ಲೇ ಅದೇ ಗ್ರಾಮದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದ ವ್ಯಕ್ತಿ ಕಡಬ ತಾಲೂಕಿನ ಕುಂತೂರು ಗ್ರಾಮದ ಎರ್ಮಾಳದ ಸತೀಶ್(50) ಎನ್ನಲಾಗಿದೆ. ಇವರು ಕಳೆದ ಎರಡು ತಿಂಗಳ ಹಿಂದೆಯೇ ನಾಪತ್ತೆಯಾಗಿದ್ದು, ಈ ಬಗ್ಗೆ ಪತ್ನಿ ಗೀತಾ ಅವರು ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಆ. 2 ರಂದು ಮನೆಬಿಟ್ಟು ಹೋದವರು ಬಳಿಕ ನಾಪತ್ತೆಯಾಗಿದ್ದು ತನ್ನ ಗಂಡ ಮದ್ಯಪಾನ ವ್ಯಸನಿಯಾಗಿದ್ದರು. ವಿನಾಕಾರಣ ಜಗಳವಾಡಿ ,ಆಗಾಗ ಮನೆಬಿಟ್ಟು ಹೋಗಿ ವಾರಗಳ ನಂತರ ಮನೆಗೆ ಬರುತ್ತಿದ್ದರು. ಮೊನ್ನೆಯೂ ಮನೆ ಬಿಟ್ಟು ಹೋಗಿದ್ದು ಎಲ್ಲಿಯೋ ದೂರ ಹೋಗಿ ನೆಲೆಸಿರಬಹುದೆಂದು ತಿಳಿದು ನಾನು ದೂರು ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಡಬ: ನಿನ್ನೆ ಕೊಳೆತ ಸ್ಥಿತಿಯಲ್ಲಿದ್ದ ತಲೆಬುರುಡೆ ಪತ್ತೆ; ಇಂದು ದೇಹದ ಭಾಗಗಳು ಪತ್ತೆ!
ಇದೀಗ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ಮೃತದೇಹದ ಕುರುಹುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇದು ಕಾಣೆಯಾದ ಸತೀಶರ ಎಂಬವರದ್ದೇ ಎಂಬ ಸಂಶಯ ಕುಟುಂಬಸ್ಥರನ್ನು ಬಲವಾಗಿ ಕಾಡಿದೆ. ಪೊಲೀಸರು ದೂರು ದಾಖಲಿಸಿದ್ದು, ತನಿಖೆಯ ಬಳಿಕವಷ್ಟೇ ಸತ್ಯಾಂಶ ತಿಳಿದು ಬರಬೇಕಿದೆ.