ಕಡಬ: ಕುಮಾರಧಾರ ನದಿಗೆ ಮೀನು ಹಿಡಿಯಲು ಹೋಗಿ ವ್ಯಕ್ತಿ ನೀರಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಕೊನೆಮಜಲು ಪರಪ್ಪು ಎಂಬಲ್ಲಿ ಮಂಗಳವಾರ ಅಪರಾಹ್ನ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಕೊಯಿಲ ಗ್ರಾಮದ ಪರಪ್ಪು ನಿವಾಸಿ ಮಾಯಿಲ ಮುಗೇರ ಎಂಬವರ ಪುತ್ರ ಆನಂದ ಮುಗೇರ (26) ಎಂದು ಗುರುತಿಸಲಾಗಿದೆ. ಈತ ಕುಮಾರಧಾರ ನದಿಯ ಕೊನೆಮಜಲು ಎಂಬಲ್ಲಿ ಬಲೆ ಬೀಸಿ ಮೀನುಹಿಡಿಯಲು ಮಧ್ಯಾಹ್ನ ಬಳಿಕ ಮನೆಗೆ ಬಂದಿದ್ದ ಸಂಬಂದಿಕ ಬಾಲಕನನ್ನು ಕರೆದುಕೊಂಡು ಹೋಗಿದ್ದ. ಬಾಲಕನ್ನು ನದಿ ದಡದಲ್ಲಿಬಿಟ್ಟು ನದಿಯ ಇನ್ನೊಂದು ಭಾಗದ ಆಳವಾದ ನೀರು ಇರುವ ಜಾಗದಲ್ಲಿ ಬಲೆಬೀಸಿ ವಾಪಾಸ್ಸಾಗುವಾಗ ಸುಸ್ತಾಗಿ ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಡಬ ಪೋಲೀಸರು ಇಳಿ ಸಂಜೆ ತನಕ ಹುಡುಕಾಡಿ ವಾಪಾಸ್ಸಾಗಿದ್ದಾರೆ. ಕಡಬ ಠಾಣಾಧಿ ರುಕ್ಮನಾಯ್ಕ್ ಮಾರ್ಗದರ್ಶನದಲ್ಲಿ ಎ.ಎಸ್. ಸಿ.ಟಿ.ಸುರೇಶ್, ಪೋಲೀಸ್ ಸಿಬ್ಬಂದಿ ಭವಿತ್ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದರು. ನೀರುಪಾಲಾದ ವ್ಯಕ್ತಿಯ ಸುಳಿವು ದೊರೆಯದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗಿನಿಂದ ಮುಳುಗು ತಜ್ಷರನ್ನು ಕರೆಸಿ ನದಿಯಲ್ಲಿ ಪತ್ತೆ ಮಾಡಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ.