ಕಲ್ಲಡ್ಕ(ಅ.23): ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಹಾಗೂ ಮಂಗಳೂರಿನ ಪ್ರಸಾದ್ ನೇತ್ರಾಲಯ ಇದರ ಜಂಟಿ ಆಶ್ರಯದಲ್ಲಿ 10ದಿನಗಳ ಕಾಲ ಉಚಿತ ನೇತ್ರ ತಪಾಸಣಾ ಶಿಬಿರವು ಕಳೆದ ಜನವರಿ ತಿಂಗಳಿನಲ್ಲಿ ಜರಗಿತ್ತು. ನೇತ್ರ ತಪಾಸಣಾ ಸಂದರ್ಭದಲ್ಲಿ ಕನ್ನಡಕದ ಅವಶ್ಯಕತೆಯನ್ನು ತಿಳಿಸಿರುವವರಿಗೆ ಅ.22 ರಂದು ಶ್ರೀರಾಮ ಪ್ರಾಥಮಿಕ ಶಾಲಾ ವಿಭಾಗದ ವೇದವ್ಯಾಸಧ್ಯಾನ ಮಂದಿರದಲ್ಲಿ ಉಚಿತವಾಗಿ ಕನ್ನಡಕವನ್ನು ವಿತರಿಸಲಾಯಿತು.


ಮಂಗಳೂರು ಪ್ರಸಾದ್ ನೇತ್ರಾಲಯದ ಸಂಸ್ಥಾಪಕ ಡಾ| ಕೃಷ್ಣಪ್ರಸಾದ್ ಮಾತನಾಡಿ ನಾವು ಈಗ ಉತ್ತಮ ಗುಣಮಟ್ಟದ ಕನ್ನಡಕವನ್ನು ನೀಡುತ್ತಿದ್ದೇವೆ. ಈ ವಿದ್ಯಾಕೇಂದ್ರದ ಪ್ರಮುಖರಿಂದ ಪತ್ರವನ್ನು ಪಡೆದು ನಮ್ಮ ಸಂಸ್ಥೆಗೆ ಬಂದಲ್ಲಿ ದೃಷ್ಟಿದೋಷ ಪರೀಕ್ಷೆ ಮತ್ತು ಕನ್ನಡಕದ ಬದಲಾವಣೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಅಲ್ಲದೆ ನಾವು ಮನೆ ಮನೆಗೆ ತೆರಳಿ ಅಂದರೆ ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ಇರುವವರಿಗೆ ಅವರ ಮನೆಯಲ್ಲಿಯೇ ಪರೀಕ್ಷೆ ಮಾಡಿ ಉಚಿತವಾಗಿ ಕನ್ನಡಕ ನೀಡುವ ಹೊಸ ಯೋಜನೆ ’ಪೈಲೆಟ್ ಪ್ರಾಜೆಕ್ಟ್’ ನಡೆಸಲು ಉದ್ದೇಶಿಸಿದ್ದೇವೆ. ಅದನ್ನು ಈ ಗ್ರಾಮದಲ್ಲಿ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿರುವ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ರವರು ಮಾತನಾಡಿ ಶ್ರೀರಾಮ ವಿದ್ಯಾಕೇಂದ್ರವು ಪ್ರತೀ ವರ್ಷ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಥೆಯು ಸಂಸ್ಕಾರಯುತವಾದ ಶಿಕ್ಷಣದ ಜೊತೆಗೆ ಸಮಾಜದ ಹಿತವನ್ನು ಕಾಪಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅದರಲ್ಲಿ ದೃಷ್ಟಿದೋಷ ನಿವಾರಣೆಯ ಕಾರ್ಯವು ಒಂದಾಗಿದೆ. ಈ ಕಾರ್ಯವನ್ನು ಮಂಗಳೂರಿನ ಪ್ರಸಾದ್ ನೇತ್ರಾಲಯ ನಮ್ಮ ಸಂಸ್ಥೆಯಲ್ಲಿ ನಡೆಸಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ300ಕ್ಕೂ ಹೆಚ್ಚು ಮಂದಿಗೆ ಕನ್ನಡಕವನ್ನು ವಿತರಿಸಲಾಯಿತು. ಪ್ರಸಾದ್ ನೇತ್ರಾಲಯದ ಸಂಸ್ಥಾಪಕ ಡಾ| ಕೃಷ್ಣಪ್ರಸಾದ್ ರನ್ನು ವಿದ್ಯಾಕೇಂದ್ರದ ಪ್ರಮುಖರು ಸನ್ಮಾನಿಸಿದರು. ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ ಹಾಗೂ ಪ್ರಸಾದ್ ನೇತ್ರಾಲಯದ ಪಿಆರ್ಒ ಮಧುಕರ್ ಮತ್ತು ಸಹಾಯಕರು ಉಪಸ್ಥಿತರಿದ್ದರು.

ಪದವಿ ವಿಭಾಗದ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ಕಟ್ಟೆ ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕ ರವಿರಾಜ್ ಕಣಂತೂರು ವಂದಿಸಿದರು. ಪ್ರೌಢಶಾಲೆಯ ಕಲಾ ಶಿಕ್ಷಕ ಜಿನ್ನಪ್ಪ ಏಳ್ತಿಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.










