ಮಂಗಳೂರು: ಕಲ್ಕೂರ ಪ್ರತಿಷ್ಠಾನ ಕಳೆದ ಮೂರುವರೆ ದಶಕಗಳಿಂದ (36 ವರ್ಷ) ನಡೆಸಿಕೊಂಡು ಬರುತ್ತಿರುವ ರಾಷ್ಟ್ರೀಯ ಮಕ್ಕಳ ಉತ್ಸವ “ಶ್ರೀಕೃಷ್ಣ ವೇಷ ಸ್ಪರ್ಧೆ” ಯನ್ನು ಈ ಬಾರಿ ಕೊರೊನಾ ಹಾವಳಿಯ ಪರಿಣಾಮ ಸೆಪ್ಟೆಂಬರ್.10 ಗುರುವಾರದಂದು ಆನ್ಲೈನ್ ಮೂಲಕ ನಡೆಸಲಾಗುತ್ತದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಪರ್ಧಾಳುಗಳು ಮಕ್ಕಳಿಗೆ ಶ್ರೀಕೃಷ್ಣ ವೇಷ ತೊಡಿಸಿ ಗರಿಷ್ಠ ಮೂರು ನಿಮಿಷಗಳ ಅವಧಿಯ ವಿಡಿಯೋ ಚಿತ್ರೀಕರಿಸಿ ಸೆಪ್ಟೆಂಬರ್.7 ರೊಳಗಾಗಿ ಇಮೇಲ್ ಮೂಲಕ ತಲುಪಿಸಬೇಕು ಎಂದು ಹೇಳಿದರು. ತೊಟ್ಟಿಲ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ವೃಕ್ಷ ಕೃಷ್ಣ, ಕಿಶೋರ ಕೃಷ್ಣ, ಶ್ರೀಕೃಷ್ಣ, ಗೀತಾ ಕೃಷ್ಣ, ಯಕ್ಷ ಕೃಷ್ಣ, ರಾಧಾ ಕೃಷ್ಣ, ದೇವಕಿ ಕೃಷ್ಣ, ವಸುದೇವ ಕೃಷ್ಣ ಇತ್ಯಾದಿ 30 ವಿಭಾಗಗಳಲ್ಲಿ ಕೃಷ್ಣ ವೇಷ ಸ್ಪರ್ಧೆ ನಡೆಸಲಾಗುತ್ತದೆ. ವಿವಿಧ ವಯೋಮಾನಗಳ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಪೋಷಕರು ತಮ್ಮ ಮಕ್ಕಳ ವಯೋಮಿತಿಗೆ ಅನುಗುಣವಾಗಿ ವಿವಿಧ ವಿಭಾಗಗಳಲ್ಲಿ ಏರ್ಪಡಿಸಲಾಗಿರುವ ಸ್ಪರ್ಧೆಯ ನಿಯಮದಂತೆ ಗರಿಷ್ಠ ಮೂರು ನಿಮಿಷಗಳ ವೀಡಿಯೋ ಚಿತ್ರೀಕರಿಸಬೇಕು. ಬಳಿಕ ಆಯಾ ವಿಭಾಗಗಳಿಗೆ ಸೂಚಿಸಲಾಗಿರುವ ಪ್ರತ್ಯೇಕ ಇಮೇಲ್ ಐಡಿಗಳಿಗೆ ಕಳುಹಿಸಬೇಕು ಎಂದು ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದರು.