ಬಂಟ್ವಾಳ: ಬಾಳ್ತಿಲ ಗ್ರಾಮದಲ್ಲಿರುವ ಶ್ರೀ ಕಾಂಪ್ರಬೈಲು ಉಳ್ಳಾಲ್ತಿ ಅಮ್ಮನವರು ಮತ್ತು ಅಜ್ವರ ದೈವಂಗಳ ಭಂಡಾರದ ಮನೆ ವಿಚಾರದಲ್ಲಿ ಎದ್ದಿರುವ ವಿವಾದ ಜೈನ ಮನೆತನ, ಗುತ್ತು ಮನೆಗಳ ವಿರುದ್ಧವಲ್ಲ, ನಾವು ಜೈನ ವಿರೋಧಿಗಳೂ ಅಲ್ಲ, ಇದರಲ್ಲಿ ಯಾವುದೇ ರಾಜಕೀಯವೂ ಇಲ್ಲ ಎಂದು ಕಾಂಪ್ರಬೈಲು ಉಳ್ಳಾಲ್ತಿ ಅಮ್ಮನವರು ಮತ್ತು ಅಜ್ವರ ದೈವಂಗಳ ಭಂಡಾರದಮನೆಯ ವ್ಯವಸ್ಥಾಪನಾ ಸಮಿತಿ ಸ್ಪಷ್ಟಪಡಿಸಿದೆ.
ಈ ಕುರಿತು ಕಾಂಪ್ರಬೈಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಾನಂದ ಮತ್ತು ಸದಸ್ಯರು, ವಿಚಾರದ ಕುರಿತು ನಾವು ನ್ಯಾಯಾಲಯದ ಮೆಟ್ಟಿಲನ್ನೇರಿಲ್ಲ. ಕೋರ್ಟು ಮಧ್ಯಂತರ ತೀರ್ಪು ನೀಡಿದ ಆದೇಶದ ಪ್ರತಿಯೂ ನಮಗೆ ತಲುಪಿಲ್ಲ. ನ್ಯಾಯಾಲಯದ ತೀರ್ಮಾನಕ್ಕೆ ನಾವು ತಲೆಬಾಗುತ್ತೇವೆ ಎಂದರು.
ಬೀಡುಮನೆಯಲ್ಲಿ ಭಂಡಾರವನ್ನು ತಮ್ಮ ತಾಯಿ ಬದುಕಿರುವಷ್ಟು ಸಮಯ ಇಟ್ಟುಕೊಳ್ಳುವುದು ಎಂದು ಮನೆಯವರು ವಿನಂತಿಸಿಕೊಂಡಿದ್ದು, ನಂತರ ನಾವೇ ಭಂಡಾರದ ಮನೆಗೆ ತಂದು ಒಪ್ಪಿಸುತ್ತೇವೆ ಎಂದಿದ್ದರು. ಆದರೆ ಆ ಮಾತನ್ನು ಇವರು ತಪ್ಪಿರುತ್ತಾರೆ,ಭಂಡಾರ ಇರುವಲ್ಲಿಯೇ ನವರಾತ್ರಿ ಉತ್ಸವ ಆಚರಣೆಯಾಗುವುದು.
ಇಲ್ಲಿ ಭದ್ರತಾ ಕೋಣೆ, ಸೇಫ್ ಲಾಕರ್ ಕೂಡ ಇದೆ ಎಂದು ಹೇಳಿದ ಅವರು, ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಪತ್ರಿಕಾಗೋಷ್ಠಿಯನ್ನು ಮಾಡುತ್ತಿದ್ದೇವೆ. ತಂತ್ರಿಗಳು, ವ್ಯವಸ್ಥಾಪನಾ ಸಮಿತಿ, ದೈವನರ್ತಕ, ಚಾಕರಿಯವರು, ಪಾತ್ರಿಗಳು, ಊರಿನ ಹಿರಿಯರು ಎಲ್ಲರೂ ಜೊತೆಯಾಗಿದ್ದೇವೆ. ಒಂದೇ ಅಭಿಪ್ರಾಯವಿದೆ. ಈ ಮನೆಯವರು ಮಾತ್ರ ವಿರೋಧಿಸುತ್ತಿದ್ದು, ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದರು.
ಈ ವೇಳೆ ಸದಸ್ಯರಾದ ಗೋಪಾಲ ಶೆಣ್ಯೆಕಂಟಿಕ, ಜಯರಾಮ ಮೂಲ್ಯ, ಪ್ರಮೋದ್ ಕುಮಾರ್, ಶಶಿಕಲಾ, ಮೋಹಿನಿ, ಮೋಹನ ಸಪಲ್ಯ, ಪ್ರಧಾನ ಅರ್ಚಕ ಶ್ರೀಪತಿ ಭಟ್, ಪ್ರಮುಖರಾದ ಸುದರ್ಶನ್ ಭಟ್, ಕ.ಕೃಷ್ಣಪ್ಪ, ಚೆನ್ನಪ್ಪ ಆರ್.ಕೋಟ್ಯಾನ್, ವಾಸುದೇವ ಪ್ರಭು, ಮೋಹನ ಸಪಲ್ಯ, ಪುಂಚೋಳಿಮಾರ್ ಗುತ್ತು ಮೋಹನ್ ರಾಜ್ ಚೌಟ, ಬಾಬು ನಾಯ್ಕ್,ರಾಮಣ್ಣ ಶೆಟ್ಟಿ ಸುಧೇಕಾರು, ದಾಮೋದರ, ಮುತ್ತಣ್ಣ ಶೆಟ್ಟಿ, ಆನಂದ ಶೆಟ್ಟಿ, ರತ್ನಾಕರ ಭಂಡಾರಿ, ಪ್ರೇಮನಾಥ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.