ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಜಾರ್ಕಳದ ಕಲ್ಲಿನ ಕ್ವಾರೇಯಲ್ಲಿ ಸ್ಫೋಟ ಸಂಭವಿಸಿದ ಘಟನೆ ನಡೆದಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಗೊಂಡ ಕಾರ್ಮಿಕರನ್ನು ತಮಿಳುನಾಡು ಮೂಲದ ಮಂಜುನಾಥ (44), ರಾಘವೇಂದ್ರ(40) ಎಂದು ಗುರುತಿಸಲಾಗಿದೆ. ಗಾಯಗೊಂಡ ಕಾರ್ಮಕರಿಬ್ಬರೂ ವಿಕಲಚೇತನರೆನ್ನಲಾಗಿದೆ.
ಕ್ವಾರೆಯ ಕಾಮಗಾರಿಯಲ್ಲಿ ಕಲ್ಲು ಒಡೆಯಲು ಸ್ಪೋಟಕಗಳನ್ನು ಬಳಸಲಾಗುತ್ತಿದ್ದು, ರಾಸಾಯನಿಕ ವಸ್ತುಗಳ ಬಳಕೆಯ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸದೇ ಇರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಫೋಟದ ಶಬ್ದ ಕೇಳಿ ಘಟನಾ ಸ್ಥಳಕ್ಕೆ ಸ್ಥಳೀಯರು ಆಗಮಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಕಾರ್ಕಳ ನಗರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಮಂಜುನಾಥ ಹಾಗೂ ರಾಘವೇಂದ್ರ ಇವರಿಬ್ಬರು ಸಹೋದರರಾಗಿದ್ದು, ಘಟನೆಯ ಕುರಿತು ಗಾಯಾಳುಗಳು ಮಾಹಿತಿ ನೀಡುತ್ತಿದ್ದರೂ, ಅದನ್ನು ಆಲಿಸುವಲ್ಲಿ ವೈದ್ಯರು ಅಥವಾ ಸಂಬಂಧಿತ ಇಲಾಖಾಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಅವರಿಬ್ಬರು ಮೂಕರು, ಕಿವುಡರು ಎಂಬ ಹೇಳಿಕೆಯನ್ನು ಸಂಬಂಧ ಪಟ್ಟವರು ಮಾಹಿತಿ ನೀಡಿದ್ದಾರೆ. ವಿಕಲ ಚೇತನರನ್ನು ಕ್ವಾರೆಯಲ್ಲಿ ಕಾರ್ಮಿಕರಾಗಿ ದುಡಿಸುತ್ತಿದ್ದಾರೆ ಎಂಬುವುದಕ್ಕೆ ಈ ಘಟನೆ ನಿದರ್ಶನವಾಗಿದೆ.